Monday, January 11, 2021

ಜಂಬುನೇರಳೆ ಹಣ್ಣಿನ ಉಪ್ಪಿನಕಾಯಿ



ಬೇಕಾಗುವ ಸಾಮಗ್ರಿಗಳು

ಜಂಬು ನೇರಳೆಹಣ್ಣುಗಳು - 25

ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ - (ಇಷ್ಟು ಪ್ರಮಾಣದ ಹಣ್ಣಿಗೆ ಸುಮಾರು 1 ಚಮಚ ಹುಡಿಯುಪ್ಪು ಹಾಗೂ 3 ಚಮಚ ಬೆಲ್ಲವನ್ನು ಹಾಕಲಾಗಿದೆ.) 

ಅಚ್ಚಖಾರದ ಹುಡಿ, ಸಿಹಿ-ಹುಳಿಗೆ ತಕ್ಕಷ್ಟು(ಇಲ್ಲಿ ಸುಮಾರು ಮೂರು ಚಮಚ ಹಾಕಲಾಗಿದೆ.)

ಹುರಿದ ಮೆಂತೆ ಹುಡಿ - 1/2 ಚಮಚ

ಸಣ್ಣ ಚಮಚದಲ್ಲಿ ಒಂದು ಚಮಚ ಸಾಸಿವೆ

ಕರಿಬೇವು - 15 ಎಸಳು 

ತೆಂಗಿನೆಣ್ಣೆ - 3 ಚಮಚ 


ಮಾಡುವ ವಿಧಾನ

* ತಯಾರಿಸುವ ಹಿಂದಿನ ದಿನವೇ ಹಣ್ಣುಗಳನ್ನು ಚೆನ್ನಾಗಿ ಸ್ವಚ್ಛ ಮಾಡಿಕೊಂಡು ಸಣ್ಣಸಣ್ಣ ಹೋಳುಗಳನ್ನಾಗಿಸಿ, ಅವುಗಳಿಗೆ ಉಪ್ಪು ಹಾಕಿ ಒತ್ತಿಟ್ಟುಕೊಳ್ಳಬೇಕು. 

*ಮರು ದಿವಸ ಎಣ್ಣೆಯನ್ನು ಕಾಯಿಸಿ, ಅದಕ್ಕೆ ಸಾಸಿವೆ ಮತ್ತು ಕರಿಬೇವಿನೆಸಳುಗಳನ್ನು ಹಾಕಿ ಒಗ್ಗರಿಸಿ. 

ನಂತರ ಇದಕ್ಕೆ, ಹಿಂದಿನದಿನವೇ ಉಪ್ಪಲ್ಲಿ ಹಾಕಿಟ್ಟಿದ್ದ ಜಂಬುನೇರಳೆ ಹಣ್ಣಿನ ಹೋಳುಗಳನ್ನು ಹಾಕಿ ಹದಿನೈದು ನಿಮಿಷ ಕೈಯಾಡಿಸುವುದು. ಹದಿನೈದುನಿಮಿಷದಲ್ಲಿ ಉಪ್ಪು ನೀರು ಬಿಟ್ಟು ಹೋಳು ಬೇಯುತ್ತದೆ.

(ನೆನಪಿರಲಿ ಸಣ್ಣ ಉರಿಯಲ್ಲಿ ಮೊಗಚುತ್ತಿರಬೇಕು.)ಮ್

*ಉಪ್ಪಲ್ಲಿ ಬೆಂದ ಹೋಳುಗಳಿಗೆ ಮೆಂತೆ ಪುಡಿ ಹಾಕಿ, ಒಂದೆರಡು ಸಲ ಕೈಯಾಡಿಸುವುದು.

*ಈ ಮಿಶ್ರಣಕ್ಕೆ (ಗಟ್ಟಿ ಬೆಲ್ಲವಾದರೆ ಕರಗಿಸಿಕೊಂಡು) ಬೆಲ್ಲ ಮತ್ತು ಖಾರದಪುಡಿ ಹಾಕಿ ಹತ್ತು ನಿಮಿಷ ತೊಳೆಸಬೇಕು. 

*ಆಮೇಲೆ ಉಪ್ಪು, ಖಾರ ಎಲ್ಲವನ್ನೂ ಹದ ನೋಡಿ ಬೇಕಿದ್ದರೆ ಮೇಲಿಂದ ತುಸು ಹಾಕಿಕೊಂಡು ಮತ್ತೆ ಒಂದೆರಡು ನಿಮಿಷ ಕೈಯಾಡಿಸಿಬಿಡಿ.

*ಉಪ್ಪಿನಕಾಯಿ ತಣಿದ ನಂತರ ಗಾಜಿನ ಬಾಟ್ಲಿಯಲ್ಲಿಹಾಕಿ ಫ್ರಿಜ್ಜಿನಲ್ಲಿಡಿ. ಬೇಕಾದಾಗ ತೋಡಿಕೊಂಡು ಉಪಯೋಗಿಸಿದರೆ ಎರಡು ತಿಂಗಳವರೆಗೆ ಕೆಡದೇ ಚೆನ್ನಾಗಿರುತ್ತದೆ.


~ತೇಜಸ್ವಿನಿ ಹೆಗಡೆ


Friday, October 30, 2020

ಸಿಹಿ ಕುಂಬಳಕಾಯಿ (ಚೀನಿಕಾಯಿ) ಅತ್ರಾಸ

Sweet pumpkin, ಸೀಗುಂಬ್ಳ ಅಥವಾ ಚೀನಿಕಾಯಿಯು ಆರೋಗ್ಯಕ್ಕೆ ಬಹಳ ಉತ್ತಮವಾದದ್ದು. ಇದರೊಳಗಿರುವ ಪೊಟಾಶಿಯಮ್ ಮತ್ತು ಬೀಟಾ ಕೆರೋಟಿನ್ ಕಣ್ಣಿಗೆ, ಹೃದಯಕ್ಕೆ, ರಕ್ತದೊತ್ತಡಕ್ಕೆ ಚರ್ಮದ ಹೊಳಪಿಗೆ ಹೀಗೆ ಹಲವು ರೀತಿಯಲ್ಲಿ ಇದು ಬಹಳ ಉಪಯೋಗಿ ಎಂದು ಹೇಳುತ್ತಾರೆ. ನಾವು ಇದರಿಂದ ಪಲ್ಯ, ಕೊದ್ದೆಲು, ಸಾಂಬಾರು, ಕಡುಬು, ಅತ್ರಾಸ – ಇತ್ಯಾದಿ ತಿನಿಸುಗಳನ್ನು ಮಾಡುತ್ತೇವೆ. ಕೊದ್ದಲು ಮಾದುವ ವಿಧಾನವನ್ನು ಇದೇ ಬ್ಲಾಗಿನಲ್ಲಿ ಹಾಕಿದ್ದು ಅದಕ್ಕಾಗಿ ಈ ಕೆಳಗಿನ ಲಿಂಕಿಗೆ ಭೇಟಿಕೊಡಬಹುದು… 👇👇

ಚೀನಿಕಾಯಿ ಕೊದ್ದೆಲು 

http://tejaswini-hegde.blogspot.com/2018/02/blog-post.html



 ಅತ್ರಾಸವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು:

 ೧) ಚೀನಿಕಾಯಿ – ೧/೪ ಕೆ.ಜಿ.

೨) ತೆಂಗಿನ ತುರಿ – ಸಣ್ಣ ಕಾಯಿಯಲ್ಲಿ ಅರ್ಧಭಾಗ

೩) ಅಕ್ಕಿ ಹಿಟ್ಟು – ೧/೪ ಕೆ.ಜಿ. (ಗಾಳಿಸಿಕೊಂಡಿರಬೇಕು)

೪) ಪರಿಮಳಕ್ಕೆ ಒಂದು ಚಮಚ ಏಲಕ್ಕಿ ಹುಡಿ

೫) ಬಿಳೇ ಎಳ್ಳು - ಎರಡು ಚಮಚ

೬) ಕರಿಯಲು ಎಣ್ಣೆ

೭) ಬೆಲ್ಲ – ಮುಕ್ಕಾಲು ಲೋಟ (ನೀರಾಗಿಸಿದ್ದು)

೮) ಉಪ್ಪು – ೧/೨ ಚಮಚ (ರುಚಿಗೆ ತಕ್ಕಷ್ಟು)

 ಮಾಡುವ ವಿಧಾನ: 

  • ಚೀನಿಕಾಯಿಯನ್ನು ತುರಿದುಕೊಳ್ಳಿ. ಇದಕ್ಕೆ ಹೆರೆದಿಟ್ಟಿಕೊಂಡಿರುವ ಕಾಯಿತುರಿಯನ್ನು ಸೇರಿಸಿ, ತುಸು ನೀರು ಚಿಮುಕಿಸಿ ಒಂದು ೫ ನಿಮಿಷ ಬೇಯಿಸಿಕೊಳ್ಳುವುದು.
  • ಸೀಗುಂಬ್ಳದಲ್ಲೇ ಸಿಹಿಯಂಶ ಇರುವುದರಿಂದ ಹೆಚ್ಚು ಬೆಲ್ಲ ಬೇಕಾಗುವುದಿಲ್ಲ. ಅಕ್ಕಿಹಿಟ್ಟನ್ನು ಯಾವ ಲೋಟದಲ್ಲಿ ಅಳತೆಗೆ ತೆಗೆದುಕೊಳ್ಳುವಿರೋ ಅದೇ ಲೋಟದಳತೆಯಲ್ಲಿ ಸುಮಾರು ಮುಕ್ಕಾಲು ಲೋಟ ಅಳತೆಯ ಬೆಲ್ಲವನ್ನು ಈ ಮಿಶ್ರಣಕ್ಕೆ ಹಾಕಿ.  ಗಮನಿಸಿ, ಇಲ್ಲಿ ನಾವು ತೆಗೆದುಕೊಂಡಿದ್ದು ಊರಿನ ಪಾಕ ಬೆಲ್ಲವನ್ನು. ಅದು ಮೊದಲೇ ನೀರಾಗಿರುತ್ತದೆ. ಅದನ್ನು ಮುಕ್ಕಾಲು ಲೋಟದಷ್ಟು ಹಾಕಲಾಗಿದೆ.
  • ಬೆಲ್ಲಹಾಕಿದ ಮೇಲೆ ಮಿಶ್ರಣಕ್ಕೆ ಉಪ್ಪು ಸೇರಿಸಿ ಸುಮಾರು ೧೫ ನಿಮಿಷ ಚೆನ್ನಾಗಿ ಕುದಿಸಿ. ಚೀನಿಕಾಯಿ, ತೆಂಗಿನತುರಿ ಎಲ್ಲವೂ ನೀರಾಗಿ ಕುದಿಯುವುದು.
  • ಇದಕ್ಕೆ ಅಕ್ಕಿಹಿಟ್ಟು ಹಾಗೂ ಹುರಿದಿಟ್ಟುಕೊಂಡಿರುವ ಎರಡು ಚಮಚ ಬಿಳೇ ಎಳ್ಳನ್ನು ಹಾಕಿ ಸಣ್ಣ ಉರಿಯಲ್ಲಿ ತೊಳೆಸುತ್ತಾ ಇರಬೇಕು. ತುಸು ಹೊತ್ತಿಗೆ ಮಿಶ್ರಣ ಮುದ್ದೆಯಾಗಿ ಬರುತ್ತದೆ. ಮಿಶ್ರಣವು ಹದವಾಗಿದೆಯೆ ಎಂದು ತಿಳಿಯಲು ಅಂಗೈಗೆ ತುಪ್ಪ ಸವರಿಕೊಂಡು ಮುದ್ದೆಯಾದ ಮಿಶ್ರಣವನ್ನು ಸ್ವಲ ಮುಟ್ಟಿನೋಡಿ. ಹದವಾಗಿ ಬಂದಿದ್ದರೆ ಅದು ಅಂಗೈಗೆ ಅಂಟುವುದಿಲ್ಲ. ಆಗ ಗ್ಯಾಸ್ ಆಫ್ ಮಾಡಿಬಿಡಿ.
  • ಹದಗೊಂಡ ಮಿಶ್ರಣವನ್ನು ಸುಮಾರು ೧೫ ನಿಮಿಷಗಳ ಕಾಲ ಮುಚ್ಚಿಡಬೇಕು.
  • ಬಾಳೆಯೆಲೆಯ ಮೇಲೋ ಇಲ್ಲಾ ಹೋಳಿಗೆ ಮಾಡುವ ಕವರಿನ ಮೇಲೋ ತುಪ್ಪ ಸವರಿಕೊಂಡ ಕೈಯಲ್ಲಿ ಮಿಶ್ರಣವನ್ನು ನುಣ್ಣಗೆ ಉಂಡೆಮಾಡಿಕೊಂಡು ಅಂಗೈಯಲ್ಲಿ ಒತ್ತಿಕೊಳ್ಳಿ.
  • ಕರಿಯಲು ಎಣ್ಣೆಯನ್ನು ಬಿಸಿಮಾಡಿಕೊಂಡು ಮಧ್ಯಮ ಉರಿಯಲ್ಲೇ (ಸಣ್ಣ ಅಥವಾ ದೊಡ್ಡ ಉರಿಯಲ್ಲಲ್ಲ) ಕವರಿನ ಮೇಲೆ ಒತ್ತಿಕೊಂಡಿದ್ದನ್ನು ಎಣ್ಣೆಗೆ ಹಾಕಿ ಚೆನ್ನಾಗಿ ಕರಿಯಿರಿ. ಬಂಡಿಗೆಹಾಕಿದ ಮೇಲೆ ಅದು ಕರಿದುಬರುವಾಗಲೇ ಜಾಲಿ ಹುಟ್ಟಿನಿಂದ ತಟ್ಟಿದರೆ ಅದು ಉಬ್ಬುವುದು. ಮಗುಚಿಹಾಕಿ ಕೆಂಪಗೆ ಬೇಯಿಸಿ ತೆಗೆಯುವುದು.
  • ಚೆನ್ನಾಗಿ ಕರಿದ ಈ ಅತ್ರಾಸವನ್ನು ಗಾಳಿಯಾಡದ ಡಬ್ಬದಲ್ಲಿಡಬೇಕು. ಈ ಅತ್ರಾಸಕ್ಕೆ ತಯಾರಿಸಿದ ದಿನಕ್ಕಿಂದ ಎರಡು ದಿನಗಳ ನಂತರವೇ ರುಚಿ ಹೆಚ್ಚು.

 ~ತೇಜಸ್ವಿನಿ ಹೆಗಡೆ.

 

Saturday, April 11, 2020

ರುಚಿಕರ ಹಾಗೂ ಆರೋಗ್ಯಕರ ಟೊಮೇಟೋ ಗೊಜ್ಜುಗಳು


ಈ ಲಾಕ್ ಡೌನ್ ಬಹಳ ಪಾಠ ಕಲಿಸಿದೆ. ಅವುಗಳಲ್ಲಿ ನಮ್ಮ ಆಹಾರ ಕ್ರಮದಲ್ಲಿ ಬದಲಾವಣೆಮಾಡಿಕೊಳ್ಳುವುದೂ ಒಂದು. ಏರುತ್ತಿರುವ ಬೆಲೆ, ಆದಷ್ಟು ನಾವು ಹೊರಬೀಳದಂತೇ ನೋಡಿಕೊಳ್ಳಬೇಕಾಗಿರುವ ಜವಾಬ್ದಾರಿಯಿಂದಾಗಿ ತೆಂಗಿನಕಾಯಿ ಬಳಸದ, ಹೆಚ್ಚು ತರಕಾರಿ ಹಾಕದೇ ಮಾಡುವಂತಹ ಅನೇಕ ಪದಾರ್ಥಗಳ ಅನ್ವೇಷಣೆಗೂ ದಾರಿಯಾಗಿದೆ! ಪ್ರಸ್ತುತ ನಾನಿಲ್ಲಿ ದೋಸೆ, ಚಪಾತಿ, ಇಡ್ಲಿಗಲ್ಲದೇ, ಅನ್ನಕ್ಕೂ ಕಲಿಸಿ ತಿನ್ನಬಹುದಾದಂಥ ಬಲು ರುಚಿಕರ ಟೊಮೇಟೋ ಗೊಜ್ಜನ್ನು (ತೆಂಗಿನ ಕಾಯಿ ಬಳಸದೇ ಮಾಡುವಂಥದ್ದು) ತಯಾರಿಸುವ ಎರಡು ರೀತಿಯ ವಿಧಾನವನ್ನು ವಿವರಿಸಿದ್ದೇನೆ.
ಮನೆಯ ಸುತ್ತಮುತ್ತ ನುಗ್ಗೆಮರವಿದ್ದರೆ ಅದರ ಸೊಪ್ಪಿನಿಂದ, ಮನೆಯಂಗಳದಲ್ಲಿ ಗೋಳಿಸೊಪ್ಪು (ಗಿಡಬಸಳೆ) ಬೆಳೆದಿದ್ದರೆ ಅದರಿಂದಲೋ ತೆಂಗಿನಕಾಯಿಯನ್ನು ಹಾಕದೇ ದಪ್ಪ ಸಾಂಬಾರನ್ನೂ ಮಾಡಬಹುದಾಗಿದೆ. ಅದರ ರೆಸಿಪಿಯನ್ನು ಮತ್ತೊಮ್ಮೆ ಹೇಳುವೆ. ಸದ್ಯಕೆ ಈಗ ಟೊಮೇಟೋ ಹಣ್ಣಿನಿಂದ ತಯಾರಿಸುವ ಎರಡು ರೀತಿಯ ಗೊಜ್ಜಿನ ವಿವರ ನೀಡುತ್ತಿದ್ದೇನೆ. ಮಾಡಿ ನೋಡಿರಿ.. ಸವಿದು ತಿಳಿಸಿರಿ. J

(ಸೂಚನೆ : ನಾನಿಲ್ಲಿ ೮ ಜನರಿಗೆ ಬೇಕಾಗುವ ಪ್ರಮಾಣ ನೀಡಿರುವೆ)
ವಿಧಾನ ೧

ಬೇಕಾಗುವ ಸಾಮಗ್ರಿಗಳು :-
೧. ಟೋಮೇಟೋ ಹಣ್ಣು – ದೊಡ್ಡ ಗಾತ್ರದ್ದಾಗಿದ್ದರೆ ೪, ಚಿಕ್ಕದ್ದಾಗಿದ್ದರೆ ೬
೨. ನೆಲಗಡಲೆ – ೩ ಚಮಚ
೩. ಬಿಳೇ ಎಳ್ಳು – ೩ ಚಮಚ
೪. ಕಡಲೆಬೇಳೆ – ೨ ಚಮಚ
೫. ಕರಿಬೇವು – ೮ ರಿಂದ ೧೦ ಎಸಳು
೬. ಇಂಗು – ರುಚಿಗೆ ತಕ್ಕಷ್ಟು
೭. ಖಾರಕ್ಕೆ ತಕ್ಕಷ್ಟು – ಹಸಿಮೆಣಸು ಅಥವಾ ಕೆಂಪುಮೆಣಸು. (ಕೆಂಪು ಮೆಣಸು ಹೆಚ್ಚು ಒಳ್ಳೆಯದು)
೮. ಉಪ್ಪು, ಹುಳಿ – ರುಚಿಗೆ ತಕ್ಕಷ್ಟು
೯. ತೆಂಗಿನೆಣ್ಣೆ – ೪ ಚಮಚ (ನೀವು ಅಡುಗೆಗೆ ಬಳಸುವ ಯಾವುದೇ ಎಣ್ಣೆ ಆಗಬಹುದು. ತೆಂಗಿನೆಣ್ಣೆ ಆರೋಗ್ಯಕ್ಕೆ ಉತ್ತಮ.)
೧೦. ಒಗ್ಗರಣೆಗೆ - ಸಾಸಿವೆ, ಕರಿಬೇವು, ಉದ್ದಿನಬೇಳೆ

ಮಾಡುವ ವಿಧಾನ : -
*ಮೊದಲು ಟೊಮೇಟೋವನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ.
*ಬಾಣಲೆಗೆ ೨-೩ ಚಮಚ ಎಣ್ಣೆ ಹಾಕಿ ಅದು ತುಸು ಬಿಸಿಯಾಗಿದ್ದೇ ಅದಕ್ಕೆ ಎಳ್ಳು, ಉದ್ದಿನಬೇಳೆ, ಕಡಲೇಬೇಳೆ, ಶೇಂಗಾ, ಕರಿಬೇವು, ಮೆಣಸು, ಇಂಗು ಎಲ್ಲಾ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
*ಇದಕ್ಕೆ ಹೆಚ್ಚಿಟ್ಟುಕೊಂಡಿರುವ ಟೊಮೇಟೋವನ್ನು ಹಾಕಿ, ಉಪ್ಪು+ಹುಳಿಯ ಜೊತೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
*ಈ ಮಿಶ್ರಣ ತಣಿದ ನಂತರ ರುಬ್ಬಿಕೊಂಡು ಇದಕ್ಕೆ ಒಂದು ಅಥವಾ ಅರ್ಧ ಚಮಚ ಎಣ್ಣೆಯಲ್ಲಿ ಸಾಸಿವೆ, ಕಾಲು ಚಮಚ ಉದ್ದಿನಬೇಳೆ, ಒಂದೆರಡು ಎಸಳು ಕರಿಬೇವಿನಿಂದ ಒಗ್ಗರಣೆ ಹಾಕಿ. (ಕರಿಬೇವು ಕಡಿಮೆ ಇದ್ದರೆ ತುಸುವೇ ಬಳಸಬಹುದು. ಕಡಲೆ, ಉದ್ದಿನಬೇಳೆ, ಶೇಂಗಾ – ಇವೆಲ್ಲಾ ಹಾಕುವುದರಿಂದ ತೆಂಗಿನಕಾಯಿ ಕಾಕಬೇಕೆಂದಿಲ್ಲ. ಬಹಳ ರುಚಿಯಾಗಿರುತ್ತದೆ. ಬೇಕಿದ್ದಲ್ಲಿ ಮರುದಿವಸವೂ ಫ್ರಿಜ್ಜಿಂದ ತೆಗೆದು ತುಸು ಬಿಸಿಮಾಡಿ ಬಳಸಬಹುದು.)

ವಿಧಾನ ೨ : ಇದು ಮೊದಲಿನದ್ದಕ್ಕಿಂತ ಮತ್ತೂ ಸುಲಭ ಹಾಗೂ ಸರಳ.

ಬೇಕಾಗುವ ಸಾಮಗ್ರಿಗಳು :
೧. ಟೊಮೇಟೋ – ೪-೫
೨. ತೆಂಗಿನೆಣ್ಣೆ – ೩-೪ ಚಮಚ
೩. ಈರುಳ್ಳಿ – ಸಾಧಾರಣ ಗಾತ್ರದ್ದು ಒಂದು
೪. ಹಸಿಮೆಣಸು/ಕೆಂಪುಮೆಣಸು – ಖಾರಕ್ಕೆ ತಕ್ಕಷ್ಟು
೫. ಪುಟಾಣಿ ಬೇಳೆ – ಎರಡು ಮುಷ್ಟಿ
೬. ಉಪ್ಪು, ಹುಳಿ ಮತ್ತು ಇಂಗು
೭. ಒಗ್ಗರಣೆಗೆ : ಸಾಸಿವೆ, ಕರಿಬೇವು ಹಾಗೂ ಒಂದು ಒಣಮೆಸಿನ ಚೂರು

ಮಾಡುವ ವಿಧಾನ
*ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಮೊದಲು ಹೆಚ್ಚಿಟ್ಟುಕೊಂಡಿರುವ ಟೊಮೇಟೊವನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಗೆ (ಎಣ್ಣೆ ಇದ್ದಿರುತ್ತದೆ ಮೊದಲೇ ಹಾಕಿದ್ದು.. ಬೇಕಿದ್ದಲ್ಲಿ ಮತ್ತೆ ಸ್ವಲ್ಪ ಹಾಕಿಕೊಳ್ಳಿ) ಹೆಚ್ಚಿಟ್ಟುಕೊಂಡಿರುವ ಈರುಳ್ಳಿಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ.
*ಅದೇ ಬಾಣಲೆಯಲ್ಲಿ ಇರುವ ಎಣ್ಣೆ ಪಸೆಯಲ್ಲೇ ಮೆಣಸನ್ನು ಹುರಿದಿಟ್ಟುಕೊಳ್ಳಿ.
*ಈಗ ಮೇಲೆ ಹೇಳಿರುವಂತೇ ಹುರಿದಿಟ್ಟುಕೊಂಡ ಎಲ್ಲಾ ಮಿಶ್ರಣಕ್ಕೆ (ತುಸು ತಣಿದ ನಂತರ) ಪುಟಾಣಿಬೇಳೆ, ಉಪ್ಪು, ಹುಳಿ, ಚಿಟಿಕೆ ಇಂಗು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
*ಈ ಮಿಶ್ರಣಕ್ಕೆ ಸಾಸಿವೆ, ಕರಿಬೇವು ಹಾಗೂ ಒಣಮೆಣಸಿನ ಚೂರುಹಾಕಿ ಒಗ್ಗರಿಸಿ.
ಇದನ್ನೂ ಮಾಡಿನೋಡಿ.. ಸವಿದು ಹೇಳಿ.

ಬದುಕಿಗಾಗಿ ತಿನ್ನುವತ್ತ ನಮ್ಮ ನೋಟ ಸಾಗಲಿ. ರುಚಿಕರ, ಆರೋಗ್ಯಕರ, ಸುಲಭ, ಸರಳ ಆಹಾರದ ಶೈಲಿಯಿಂದ ಸ್ವಸ್ಥರಾಗುತ್ತಾ ಸಾಗೋಣ.

#ಆರೋಗ್ಯವೇ_ಭಾಗ್ಯ
#ಲಾಕ್ಡೌನ್_ಕಾಲದ_ರೆಸಿಪಿಗಳು
#ಅಮ್ಮನ_ಅಡುಗೆ

~ತೇಜಸ್ವಿನಿ ಹೆಗಡೆ

Thursday, November 08, 2018

ಗೋವೆಕಾಯಿ ಕಡುಬು

ಕೃಪೆ: ಅಂತರ್ಜಾಲ

ಗೋವೆಕಾಯಿಗೆ ಚೀನಿಕಾಯಿ, ಸಿಹಿಗುಂಬಳ ಕಾಯಿ ಎಂಬಿತ್ಯಾದಿ ಹೆಸರುಗಳಿವೆ. ಗೋವೆಕಾಯಿಯಲ್ಲಿ ವಿಟಮಿನ್ ಎ ಬಹಳ ಹೆಚ್ಚಿರುತ್ತದೆ. ಅಲ್ಲದೇ, ಇದರೊಳಗಿರುವ ಪೊಟಾಶಿಯಮ್ ಮತ್ತು ಬೀಟಾ ಕೆರೋಟಿನ್ ಕಣ್ಣಿಗೆ, ಹೃದಯಕ್ಕೆ, ರಕ್ತದೊತ್ತಡಕ್ಕೆ, ಚರ್ಮದ ಹೊಳಪಿಗೆ ಹೀಗೆ ಗೋವೆಕಾಯಿ ಬಹು ಉಪಯೋಗಿಯಾಗಿದೆ. ದೀಪಾವಳಿಯ ದಿವಸ ಬಹುತೇಕ ಹವ್ಯಕರ ಮನೆಗಳಲ್ಲಿ ಇದರದ್ದೇ ಕಡುಬನ್ನು ಸಿಹಿ ತಿಂಡಿಯಾಗಿ ಮಾಡುತ್ತಾರೆ. ಇದನ್ನು ತಯಾರಿಸಲು ಬೇಕಾಗುವ ವಸ್ತುಗಳು ಬಹಳ ಕಡಿಮೆ. ಆದರೆ ಮಾಡುವ ಹದ ಚೆನ್ನಾಗಿ ಗೊತ್ತಿರಬೇಕಾಗುತ್ತದೆ. ಗೋವೆಕಾಯಿಯ ಕಡುಬಿಗೆ ಹಸುವಿನ ತುಪ್ಪ ಹಾಕಿ ತಿಂದರೆ ವಾಯು ಸಮಸ್ಯೆ ಆಗದು, ಹೊಟ್ಟೆಗೂ ತಂಪು, ಜೀರ್ಣವಾಗುವುದು ಸುಲಭವಾಗಿ. ಅಲ್ಲದೇ ಮೊಸರಿನ ಜೊತೆಗೂ ಸವಿಯಬಹುದು.. ಇದರ ಮಜವೇ ಬೇರೆ. ಸಿಹಿ ಪ್ರಿಯರು ಇದಕ್ಕೆ ಜೇನುತುಪ್ಪ, ತುಪ್ಪ, ಸಕ್ಕರೆ, ಬೆಲ್ಲ ಎಲ್ಲವನ್ನೂ ಸುರಿದುಕೊಂಡು ತಿನ್ನುವುದೂ ಇದೆ. ಈಗ ಇದನ್ನು ತಯಾರಿಸುವ ವಿಧಾನವನ್ನು ನೋಡೋಣ. ನೀವೂ ಸಿಹಿಗಡುಬನ್ನು ತಯಾರಿಸಿಕೊಂಡು ಮೆದ್ದು ಹೇಗಾಗುವುದು ಎಂಬುದನ್ನೂ ಪ್ರತಿಕ್ರಿಯೆಯಲ್ಲಿ ತಿಳಿಸಿರಿ


**********************
ಗೋವೆಕಾಯಿ ಕಡುಬು
ಬೇಕಾಗುವ ಸಾಮಗ್ರಿಗಳು
(ಸಾಧಾರಣ ದೊಡ್ಡ ಗಾತ್ರದ ಐದು ಕಡುಬಿನ ಪ್ರಮಾಣಕ್ಕೆ)
·        ಅಕ್ಕಿ – ೧ ಲೋಟ
·        ಚೀನಿಕಾಯಿ ಅಥವಾ ಗೋವೆಕಾಯಿ ಹೋಳುಗಳು – ಎರಡೂವರೆ ಲೋಟ
·        ಬೆಲ್ಲ – ಊರಿನ ಹದಾ ಗಟ್ಟಿ ಬೆಲ್ಲವಾದರೆ ಒಂದೂಕಾಲು ಲೋಟ. ಅಂಗಡಿಯ ಅಚ್ಚುಬೆಲ್ಲವಾದರೆ, ಅದನ್ನು ಕುಟ್ಟಿ ಪುಡಿಮಾಡಿಕೊಂಡು ಒಂದೂವರೆ ಲೋಟ ಹಾಕಬೇಕು.
·        ಕಾಯಿ ತುರಿ – ೧/೨ ಭಾಗ
·        ಏಲಕ್ಕಿ – ಪರಿಮಳಕ್ಕೆ ತಕ್ಕಂತೆ
·        ಬಾಳೆ ಎಲೆಗಳು – ಉದ್ದ ಗಾತ್ರ ಬಾಳೆಯೆಲೆ ೩ (ಒಂದು ಬಾಳೆಯೆಲೆಯಲ್ಲಿ ಎರಡು ಕಡುಬನ್ನು ಹಚ್ಚಬಹುದು ಇಲ್ಲಾ ಅದನ್ನು ತುಂಡು ಮಾಡಿಕೊಂಡು ಬೇರೆಬೇರೆಯಾಗೂ ಹಚ್ಚಬಹುದು.)

ಮಾಡುವ ವಿಧಾನ
೧. ಮೊದಲು ಅಕ್ಕಿಯನ್ನು ೪ ಗಂಟೆ ನೆನೆಹಾಕಬೇಕು.
೨. ನೆನೆದ ಅಕ್ಕಿಯನ್ನು ಮಂದವಾಗಿ ಅಂದರೆ ಜಾಸ್ತಿ ನೀರು ಹಾಕದೆ ಗಟ್ಟಿಯಾಗಿ ಮತ್ತು ನುಣ್ಣಗೆ ಕಡೆದಿಟ್ಟುಕೊಳ್ಳಬೇಕು. ಅಕ್ಕಿಯನ್ನು ಕಡೆಯುವಾಗಲೇ ಏಲಕ್ಕಿಯನ್ನೂ ಅದಕ್ಕೇ ಹಾಕಿಬಿಡುವುದು.
೩. ಗೋವೆಕಾಯಿಯನ್ನು ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳುವುದು.
೪. ಬೆಲ್ಲವನು ದಪ್ಪ ತಳದ ಪಾತ್ರೆಗೆ ಹಾಕಿ ಕುದಿಸುವುದು.
೫. ಬೆಲ್ಲ ಕುದಿ ಬರುತ್ತಿರುವಂತೇ, ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಗೋವೆಕಾಯಿಯ ಹೋಳು ಮತ್ತು ಅರ್ಧಗಡಿ ತೆಂಗಿನ ಕಾಯಿ ತುರಿಯನ್ನು ಹಾಕಿ ಹತ್ತು ನಿಮಿಷ ಕುದಿಸುವುದು.
೬. ಈ ಮಿಶ್ರಣಕ್ಕೀಗ ಬೀಸಿಟ್ಟುಕೊಂಡಿರುವ ಗಟ್ಟಿ ಅಕ್ಕಿ ಹಿಟ್ಟನ್ನು ಒಂದು ಕೈಯಿಂದ ಹಾಕುತ್ತಾ ಮತ್ತೊಂದು ಕೈಯಲ್ಲಿ ತೊಳೆಸುತ್ತಲೇ ಇರಬೇಕು. ಪೂರ್ತಿ ಅಕ್ಕಿಹಿಟ್ಟನ್ನು ಹಾಕಿ ಕೊಂಡು ಆಮೇಲೆ ಅದನ್ನು ತೊಳೆಸಲು ಹೋದರೆ ಅದು ಗಟ್ಟಿಯಾಗಿಬಿಡುವುದು. ಮೊದಮೊದಲು ಇದು ಕಷ್ಟವಾದರೆ, ಸಹಾಯಕ್ಕೊಬ್ಬರು ಬಳಿ ಇದ್ದರೆ, ಒಬ್ಬರು ಹಿಟ್ಟನ್ನು ಸುರಿಯುತ್ತಾ ಹೋದರೆ ಮತ್ತೊಬ್ಬರು ಬಿಡದೇ ತೊಳೆಸುತ್ತಾ ಹೋಗುವುದು ಒಳ್ಳೆಯದು. ಹೀಗೆ ತೊಳೆಸುತ್ತಾ ಹೋದಂತೆ ಮಿಶ್ರಣ ಮಣ್ಣಿಯ ಹದಕ್ಕೆ ಬಂದು ಮುದ್ದೆಯಾಗುವುದು. ಆಗ ಒಲೆಯನ್ನಾರಿಸಿಬಿಡುವುದು.
೭. ಬಾಳೆ ಎಲೆಗಳನ್ನು ಒಲೆಯಲ್ಲಿ ತುಸು ಬಾಡಿಸಿಟ್ಟುಕೊಳ್ಳುವುದು.
೮. ತುಸು ತಣಿದ ಮೇಲೆ ಮುದ್ದೆಯನ್ನು ಕೈಯಲ್ಲಿ ತೆಗೆದುಕೊಂಡು ತುಸು ಬಾಡಿಸಿಟ್ಟುಕೊಂಡಿರುವ ಬಾಳೆ ಎಲೆಯ ಮೇಲೆ ಬೇಕಾದ ಆಕಾರಕ್ಕೆ ಹಚ್ಚಿ, ಅದನ್ನು ನಾಲ್ಕೂ ಬದಿಯಿಂದ ಮಡಚುವುದು.
೯. ಇದನ್ನು ಇಡ್ಳಿ ದಳ್ಳೆಯಲ್ಲಿಟ್ಟು ಬೇಯಿಸುವುದು. ಇದು ಬೇಯಲು ಸುಮಾರು ಒಂದು ತಾಸು ಬೇಕಾಗುವುದು.
೧೦. ಹದವಾಗಿ ಬೆಂದ ಬೆಲ್ಲದ ಗೋವೆಕಾಯಿ ಸಿಹಿಗಡುಬನ್ನು ತುಪ್ಪದ ಜೊತೆಗೆ ಅಥವಾ ಮೊಸರಿನ ಜೊತೆಗೆ ಮೆಲ್ಲಬಹುದು. ಕೆಲವರು ಇದಕ್ಕೆ ಜೇನುತುಪ್ಪ, ಬೆಲ್ಲ, ತುಪ್ಪ ಎಲ್ಲವನ್ನೂ ಹಾಕಿಕೊಂಡು ತಿನ್ನುವುದೂ ಇದೆ.

ರೆಸಿಪಿ ಕೃಪೆ : ನನ್ನ ಅಮ್ಮ ಶ್ರೀಮತಿ ಜಯಲಕ್ಷ್ಮೀ ಭಟ್

~ತೇಜಸ್ವಿನಿ ಹೆಗಡೆ

Friday, August 31, 2018

ನುಗ್ಗೆ ಸೊಪ್ಪಿನ ತಂಬುಳಿ



ನಮ್ಮ ಸುತ್ತ ಮುತ್ತಲು ಬೆಳೆಯುವ, ನಾವು ಮನೆಯಲ್ಲೇ ಬೆಳೆಸಬಹುದಾದ ಅನೇಕ ಸೊಪ್ಪುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿರುತ್ತವೆ ಮತ್ತು ಅವುಗಳ ಪದಾರ್ಥಗಳನ್ನೂ ತಿನ್ನಲೂ ರುಚಿಕರವಾಗಿರುವುದು.

ನುಗ್ಗೆ ಸೊಪ್ಪು ಎಲ್ಲೆಡೆ ಸರ್ವೇಸಾಮಾನ್ಯವಾಗಿ ಸಿಗುವಂಥ ಬಹೋಪಯೋಗಿ ಸೊಪ್ಪು. ಹಲವು ವಿಟಮಿನ್ನುಗಳ ಆಗರವಿದು. ನರ ದೌರ್ಬಲ್ಯಕ್ಕೆ, ರಕ್ತ ಹೀನತೆಗೆ, ರಕ್ತ ಶುದ್ಧಿಗೆ, ಹಾಲೂಡಿಸುವ ತಾಯಂದಿರಿಗೆ, ಮಲಬದ್ಧತೆಗೆ, ಅಧಿಕ ರಕ್ತದೊತ್ತಡದ ನಿವಾರಣೆಗೆ ಹೀಗೆ ಹಲವು ರೀತಿಯ ದೈಹಿಕ ಸಮಸ್ಯೆಗಳಿಗೆ ರಾಮಬಾಣ ಈ ಸೊಪ್ಪು. ಇದರ ತಂಬುಳಿ, ಚಟ್ನೆ, ಸಾಂಬಾರು, ಪಲ್ಯ, ಬಜೆ ಎಲ್ಲವೂ ತಿನ್ನಲು ಚೆನ್ನಾಗಿರುತ್ತವೆ. ಪ್ರಸ್ತುತ ನಾನು ಇದರ ತಂಬುಳಿ ತಯಾರಿಸುವ ವಿಧಾನವನ್ನು ವಿವರಿಸುತ್ತಿದ್ದೇನೆ. ಸಾಂಬಾರಿನೊಳಗಿರುವ ಸೊಪ್ಪು ಹೆಚ್ಚು ಬೆಂದುಬಿಟ್ಟಿರುತ್ತದೆ ಮತ್ತು ನಾವು ಹೆಚ್ಚೆಂದರೆ ಒಂದೆರಡು ಸೌಟು ಸೇವಿಸಬಹುದೇನೋ. ಆದರೆ ತಂಬುಳಿಯಲ್ಲಿ ಇದರ ಅಂಶಯ ಬಹಳ ಅಧಿಕವಾಗಿರುತ್ತದೆ. ಅನ್ನದ ಜೊತೆ ಕಲಸಿ ತಿಂದರೂ ರುಚಿ, ಹಾಗೇ ಕುಡಿದರೂ ಚೆನ್ನಾಗಿರುತ್ತದೆ. ತಯಾರಿಸುವ ವಿಧಾನವೂ ಬಹಳ ಸುಲಭ ಹಾಗೂ ಸರಳ.

ಬೇಕಾಗುವ ಸಾಮಗ್ರಿಗಳು (ಮೂರ್ನಾಲ್ಕು ಜನರ ಅಳತೆಯಲ್ಲಿ)
೧. ನುಗ್ಗೆ ಸೊಪ್ಪು (ನಾಲ್ಕು ದೊಡ್ಡ ಮುಷ್ಟಿಯಷ್ಟು)
೨. ಬಿಳೇ ಎಳ್ಳು – ೧ ಚಮಚ
೩. ಜೀರಿಗೆ – ೧ ಚಮಚ
೪. ಕಾಳು ಮೆಣಸು – ೪-೫ ಕಾಳುಗಳು
೫. ಇಂಗು – ಚಿಟಿಕೆಯಷ್ಟು
೬. ತೆಂಗಿನೆಣ್ಣೆ (ಅಥವಾ ತುಪ್ಪವನ್ನೂ ಬಳಸಬಹುದು) – ೧-೨ ಚಮಚ (ಹುರಿಯಲು ಬೇಕಾಗುವಷ್ಟು ಮಾತ್ರ)
೭. ಕಡೆದ ಮಜ್ಜಿಗೆ – ೨ ದೊಡ್ಡ ಲೋಟ
೮. ತೆಂಗಿನ ತುರಿ – ಒಂದು ಮುಷ್ಟಿಯಷ್ಟು (ಬೀಸಲು ಬೇಕಾಗುವಷ್ಟು ಮಾತ್ರ)
೯. ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ
*ಕಾದ ಎಣ್ಣೆಗೆ ಬಿಳೇ ಎಳ್ಳು, ಜೀರಿಗೆ, ಇಂಗು ಮತ್ತು ಕಾಳುಮೆಣಸುಗಳನ್ನು ಹಾಕಿ ಒಗ್ಗರಿಸಿಕೊಳ್ಳಿ.
*ಅವುಗಳು ಹುರಿದು ಚಟಗುಡುವಾಗ, ಮೊದಲೇ ತೊಳೆದಿಟ್ಟುಕೊಂಡಿರುವ ಸೊಪ್ಪನ್ನು ಹಿಂಡಿ ಈ ಒಗ್ಗರಣೆಗೆ ಹಾಕಿ ಚೆನ್ನಾಗಿ ಹುರಿಯಿರಿ (ಅದು ಬಾಡುವಷ್ಟು ಹೊತ್ತು).
*ಮಿಶ್ರಣ ಚೆನ್ನಾಗಿ ಹುರಿದು ಸೊಪ್ಪು ಬಾಡಿದ ನಂತರ, ತುಸು ತಣಿಯಲು ಬಿಟ್ಟು, ಕಾಯಿತುರಿಯೊಂದಿಗೆ ನುಣ್ಣಗೆ ಬೀಸಿಕೊಳ್ಳಿ.
*ನಿಮಗೆ ತಂಬುಳಿ ಕುಡಿಯಲು ಬೇಕಾಗುವಷ್ಟು ತೆಳ್ಳಗಿರಬೇಕೆಂದರೆ ಬೀಸಿದ ಮಿಶ್ರಣೆಗೆ ಮಜ್ಜಿಗೆಯ ಜೊತೆ ೧-೨ ಲೋಟ ನೀರನ್ನು ಸೇರಿಸಿಕೊಂಡು ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕುಡಿಯಬಹುದು. ಇಲ್ಲಾ, ಬೀಸಿದ ಮಿಶ್ರಣಕ್ಕೆ ಮಜ್ಜಿಗೆ, ಒಂದು ಲೋಟ ನೀರು ಮತ್ತು ಉಪ್ಪು ಸೇರಿಸಿ ಹದಾ ಮಂದವಾಗಿಸಿಕೊಂಡು ಅನ್ನಕ್ಕೆ ಕಲಸಿಯೂ ತಿನ್ನಬಹುದು ಅಥವಾ ಹಾಗೇ ಕುಡಿಯಲೂಬಹುದು.
ಬಹಳ ರುಚಿಕರವಾಗಿರುವುದಂತೂ ಸತ್ಯ! ಮಾಡಿ ನೋಡಿ ಒಮ್ಮೆ.

~ತೇಜಸ್ವಿನಿ ಹೆಗಡೆ.

Saturday, February 24, 2018

ಚೀನಿಕಾಯಿ (ಸಿಹಿ ಕುಂಬಳಕಾಯಿ) ಕೊದ್ದೆಲು

Sweet Pumpkin ಅನ್ನು ನಾವು ಚೀನಿಕಾಯಿ ಎಂದು ಕರೆಯುತ್ತೇವೆ. ಇದಕ್ಕೆ ಸಿಹಿ ಕುಂಬಳ ಎಂದೂ ಹೇಳುತ್ತಾರೆ. ಮಲೆನಾಡಿನಲ್ಲಿ ದೀಪಾವಳಿಯ ದಿವಸ ಇದರ ಕಡುಬು ಮಾಡದ ಮನೆಯೇ ಇಲ್ಲ ಎನ್ನಬಹುದು. ನೋಡಲು ಕಿತ್ತಳೆ/ಕಡು ಹಸಿರು ಬಣ್ಣದಿಂದ ಕೂಡಿರುವ ಈ ಕಾಯಿ ನೋಡಲೆಷ್ಟು ಸುಂದರವೋ ಅಷ್ಟೇ ಆರೋಗ್ಯಕ್ಕೂ ಹಿತಕರ. ಇದರೊಳಗಿರುವ ಪೊಟಾಶಿಯಮ್ ಮತ್ತು ಬೀಟಾ ಕೆರೋಟಿನ್ ಕಣ್ಣಿಗೆ, ಹೃದಯಕ್ಕೆ, ರಕ್ತದೊತ್ತಡಕ್ಕೆ ಚರ್ಮದ ಹೊಳಪಿಗೆ ಹೀಗೆ ಹಲವು ರೀತಿಯಲ್ಲಿ ಇದು ಬಹಳ ಉಪಯೋಗಿ ಎಂದು ಹೇಳುತ್ತಾರೆ.  



ಬೇಕಾಗುವ ಸಾಮಗ್ರಿಗಳು (೪-೫ ಜನರ ಅಳತೆಯಲ್ಲಿ)

* ಚೀನಿಕಾಯಿ – ಸಣ್ಣ ಗಾತ್ರದ್ದಾರೆ ಪೂರ್ತಿ ಬೇಕು, ದೊಡ್ಡದಾದರೆ ಅರ್ಧ ಸಾಕು.
* ಕೆಂಪು ಮೆಣಸು ಖಾರಕ್ಕೆ ತಕ್ಕಂತೆ
* ಮೆಂತೆ 1 1/2 ಚಮಚ
* ಉದ್ದಿನ ಬೇಳೆ – 2 ಚಮಚ
* ಕೊತ್ತಂಬರಿ  - 2 ಚಮಚ
* ಜೀರಿಗೆ – 1/4 ಚಮಚ
* ಕರಿಬೇವು – 15-20 ಎಲೆಗಳು
* ಎಣ್ಣೆ – ಹುರಿಯಲು ಬೇಕಾಗುವಷ್ಟು
* ಕಾಯಿ ತುರಿ – ಅರ್ಧ ಕಡಿ (ಚಿಕ್ಕ ಕಾಯಿಯಾಯದರೆ ಪೂರ್ತಿ ಹಾಕಿ) 
* ಬೆಲ್ಲ, ಉಪ್ಪು, ಹುಳಿ – ರುಚಿಗೆ ತಕ್ಕಷ್ಟು
* ಒಗ್ಗರಣೆಗೆ ಸಾಸಿವೆ ಹಾಗೂ ಒಂದೆರಡು ಎಸಳು ಕರಿಬೇವು.

**ಗಮನಿಸಿ: ಇಲ್ಲಿ ಚಮಚ ಎಂದರೆ ದೊಡ್ಡ ಗಾತ್ರದಲ್ಲಿ... ಟೇಬಲ್ ಸ್ಪೂನ್. ದೊಡ್ಡ ಚಮದಲ್ಲಿ ಮೆಂತೆ ತೆಗೆದುಕೊಂಡರೆ ತುಸು ಕಹಿ ಬರಬಹುದು.

ತಯಾರಿಸುವ ವಿಧಾನ

~ ಮೊದಲು ಚೀನಿಕಾಯನ್ನು ಹೋಳು ಮಾಡಿಕೊಂಡು ಅದಕ್ಕೆ ಉಪ್ಪು+ಬೆಲ್ಲ+ಹುಳಿ ಹಾಕಿ ಹದವಾಗಿ ಬೇಯಿಸಿಕೊಳ್ಳಿ. ಒಂದೊಮ್ಮೆ ಇಲ್ಲಿ ಹುಳಿ, ಬೆಲ್ಲ ಮರೆತು ಹೋದರೂ ಬೀಸುವಾಗ ಅಥವಾ ಗೊಡಗುಡಿಸುವಾಗ ಹಾಕಿಕೊಳ್ಳಬಹುದು. ಚೀನಿಕಾಯಿ ಸಿಹಿಯೇ ಇರುವುದರಿಂದ ಬೆಲ್ಲ ಜಾಸ್ತಿ ಹಾಕಬೇಕೆಂದಿಲ್ಲ. ರುಚಿಗೆ ತಕ್ಕಷ್ಟು ಸಾಕಾಗುತ್ತದೆ.
~  ಕೆಂಪು ಮೆಣಸು + ಮೆಂತೆ + ಕೊತ್ತಂಬರಿ ಬೀಜ + ಜೀರಿಗೆ + ಉದ್ದಿನ ಬೇಳೆ + ಕರಿಬೇವಿನ ಎಲೆಗಳು ಇವೆಲ್ಲವನ್ನೂ ಎಣ್ಣೆಯೊಂದಿಗೆ ಹುರಿದುಕೊಳ್ಳಿ.
~ ಹುರಿದ ಮಿಶ್ರಣಕ್ಕೆ ಕಾಯಿತುರಿಗಳನ್ನು ಹಾಕಿ ತರಿತರಿಯಾಗಿ ಬೀಸಿಕೊಳ್ಳಿ (ತುಂಬಾ ನುಣ್ಣಗಾಗದಿದ್ದರೆ ಒಳ್ಳೆಯದು)
~ ಬೀಸಿದ ಮಿಶ್ರಣವನ್ನು ಬೇಯಿಸಿದ ಹೋಳಿಗೆ ಹಾಕಿ, ಉಪ್ಪು+ಹುಳಿ+ಸಿಹಿಯನ್ನು ಹದಮಾಡಿಕೊಂಡು ಚೆನ್ನಾಗಿ ಕುದಿಸಿ. ಇದು ಮಂದವಾಗಿರಬೇಕು. ಕುದಿಸುವಾಗ ಜಾಸ್ತಿ ನೀರು ಹಾಕಬಾರದು.
~ ಗೊಡಗುಡಿಸಿದ ನಂತರ ಸಾಸಿವೆ+ಒಂದೆರಡು ಎಸಳು ಕರಿಬೇವಿನ ಒಗ್ಗರಣೆ ಹಾಕಿ ಮುಚ್ಚಿಬಿಡಿ.

ಬಿಸಿ ಬಿಸಿ ಕೊದ್ದೆಲನ್ನು ಸವಿದ ಮೇಲೆ ಬೇಳೆ ಹಾಕಿದ ಸಾಂಬರ್ ತುಸು ಸಮಯ ಬೇಡವೇ ಬೇಡವೆಂದೆನಿಸಿಬಿಡುವುದಂತೂ ಖಾತ್ರಿ! ಹೆಚ್ಚಾಗಿ ಕುಚ್ಚಲಕ್ಕಿ (ಬಾಯ್ಲ್ಡ್ ರೈಸ್)ಯ ಜೊತೆಗೆ ಇದರ ಸವಿ ಇನ್ನೂ ಹೆಚ್ಚು ಅನ್ನುತ್ತಾರೆ ಹಲವರು. ಆದರೆ ವೈಟ್ ರೈಸ್ ಆದರೂ ಸೇವಿಸಲು ಬಹಳ ರುಚಿಯಾಗಿರುತ್ತದೆ.

ಸೂಚನೆ :-

ಇದೇ ರೀತಿ ಬಸಳೆ, ಬಣ್ಣದ ಸವತೆ, ಬಟಾಟೆ, ಬದನೆಕಾಯಿ – ಈ ತರಕಾರಿಗಳ ಕೊದ್ದೆಲನ್ನೂ ತಯಾರಿಸಬಹುದು. ಬಸಳೆ ಕೊದ್ದಲು ಮಾಡುವುದಾದರೆ ಮೆಂತೆಯ ಪ್ರಮಾಣ ಕಡಿಮೆ ಮಾಡಿ, ಸಾಸಿವೆಯನ್ನು ಒಂದೂವರೆ ಚಮಚ ಹಾಕಬೇಕು. ಹಾಗೇಯೇ ಬಟಾಟೆಯಂಥ ಗೆಡ್ಡೆಗೆಣಸಿನ ಕೊದ್ದೆಲು ತಯಾರಿಸುವಾಗ ಇಂಗನ್ನು ಹಾಕಬೇಕು. 

~ತೇಜಸ್ವಿನಿ ಹೆಗಡೆ

Wednesday, February 15, 2017

ಕಡಲೇ ಹಿಟ್ಟು ಮತ್ತು ಬೆಲ್ಲದ ಲಡ್ಡು

ಸಕ್ಕರೆ ಬಾಯಿಗೆ ಸಿಹಿ, ಹೊಟ್ಟೆಗೆ ವಿಷ. ಸಕ್ಕರೆಯನ್ನು ಆದಷ್ಟು ಕಡಿಮೆ ತಿನ್ನಿ.. ತಿನ್ನದೇ ಇದ್ದರೂ ನಷ್ಟವೇನಿಲ್ಲ ಎಂದೇ ಹೇಳುತ್ತಾರೆ ವೈದ್ಯರು. ಆದರೆ ಬಹುತೇಕ ಸಿಹಿ ತಿಂಡಿಗಳಿಗೆ ಸಕ್ಕರೆಯನ್ನು ಹಾಕೇ ಹಾಕುತ್ತೇವೆ. ಅದರ ಬದಲು ಬೆಲ್ಲವನ್ನು ಉಪಯೋಗಿಸಿ ಮಾಡಿದರೆ ಬಾಯಿಗೂ ರುಚಿ, ದೇಹಕ್ಕೂ ಹಿತ. ಕಡಲೇ ಹಿಟ್ಟಿನ ಲಾಡನ್ನು ಸಕ್ಕರೆ ಪಾಕದಲ್ಲಿ ಮಾಡುವುದು ಸರ್ವೇ ಸಾಮಾನ್ಯ. ಆದರೆ ಬೆಲ್ಲವನ್ನು ಬಳಸಿ ಮಾಡಿದರೂ ಬಹು ರುಚಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು. (ಸಾಧಾರಣ ಗಾತ್ರದ ೧೫ ಲಾಡಿಗೆ)

೧. ಕಡಲೇಹಿಟ್ಟು : ೧ ಲೋಟ
೨. ಬೆಲ್ಲ : ೧/೨ ಕಪ್ಪು (ತುಂಬಾ ನೀರಿನಂತಿದ್ದರೆ ತುಸು ಕಡಿಮೆ ಹಾಕಿ.. ನಿಮ್ಮ ಸಿಹಿಗೆ ತಕ್ಕಷ್ಟು)
೩. ಕಾಯಿತುರಿ : ೧/೨ ಕಪ್ಪು
೪. ತುಪ್ಪ - ೪ ಚಮಚ
೫. ಏಲಕ್ಕಿ ಪುಡಿ
೬. ಡ್ರೈಫ್ರುಟ್ಸ್ - ಬಾದಾಮಿ, ಗೋಡಂಬಿ, ಪಿಸ್ತಾ - ೧/೪ ಕಪ್
ಬೇಕಿದ್ದರೆ ಕಡಲೇ ಬೀಜವನ್ನು ಹುರ್ದಿಉ ತರಿ ತರಿಯಾಗಿ ಹುಡಿಮಾಡಿಟ್ಟುಕೊಂಡು, ಡ್ರೈಫ್ರೂಟ್ಸ್ ಬದಲಿಗೆ ಬಳಸಬಹುದು.

ಮಾಡುವ ವಿಧಾನ
೧. ಮೊದಲು ಕಡಲೇ ಹಿಟ್ಟಿಗೆ ತುಪ್ಪ ಬೆರಸಿ ಚೆನ್ನಾಗಿ ಘಮ್ಮೆನ್ನುವ ಪರಿಮಳ ಬರುವವರೆಗೆ, ಹಿಟ್ಟು ತುಸು ಕೆಂಪಾಗುವವರೆಗೆ ಹುರಿಯಬೇಕು. ಹುರಿದ ಮೇಲೆ ಗ್ಯಾಸ್ ಆಫ್ ಮಾಡಿ ಪಕ್ಕದಲ್ಲಿಟ್ಟುಕೊಳ್ಳಿ.

೨. ಬೆಲ್ಲಕ್ಕೆ ಕಾಯಿತುರಿ ಹಾಕಿಕೊಂಡು ಕುದಿಸಿಕೊಳ್ಳಿ. (ಪಾಕವಾಗ ಬೇಕೆಂದಿಲ್ಲ)

೩. ಕುದಿಬಂದ
ಬೆಲ್ಲಕ್ಕೆ ಏಲಕ್ಕಿ ಹುಡಿ, ಡ್ರೈಫ್ರುಟ್ಸ್ ಹುಡಿ/ಕಡಲೇ ಬೀಜದ ಹುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ತೊಳಸಿ, ಗ್ಯಾಸ್ ಆಫ್ ಮಾಡಿ.

೪. ಮೇಲಿನ ಮಿಶ್ರಣಕ್ಕೆ ಹುರಿದಿಟ್ಟುಕೊಂಡಿರುವ ಕಡಲೇ ಹಿಟ್ಟಿನ್ನು ಸೇರಿಸಿ ಚೆನ್ನಾಗಿ ತಿರುಗಿಸಿ, ತುಸು ಬಿಸಿ ಇರುವಾಗಲೇ ಉಂಡೆ ಕಟ್ಟಿ.
ಬೇಕಿದ್ದಲ್ಲಿ ತುಪ್ಪ ಸವರಿದ ಬಟ್ಟಲಿಗೆ ಹೊಯ್ದು, ಕೊಯ್ದು ಹಲ್ವದಂತೆಯೂ ತಿನ್ನಬಹುದು.

~ತೇಜಸ್ವಿನಿ ಹೆಗಡೆ.

Wednesday, February 24, 2016

ತರ ತರ ವಿಧ ವಿಧ ತರಕಾರಿ ಹಶಿಗಳು..

ನಮ್ಮಲ್ಲಿ ಅಂದರೆ ಮಲೆನಾಡಿನಲ್ಲಿ ತಂಬುಳಿಯಷ್ಟೇ ಪ್ರಸಿದ್ಧ ಪ್ರಚಲಿತ ಹಶಿಗಳು. ಹಶಿಗೆ ನೀವು ಒಂದರ್ಥದಲ್ಲಿ ಸಾಲಡ್ ಅಂತಾನೋ ಇಲ್ಲಾ ಮೊಸರು ಬಜ್ಜಿ ಅಂತಾನೂ ಕರೆಯಬಹುದು. (ಇನ್ಯಾವ್ಯಾವ ಹೆಸರುಗಳಿವೆ ಗೊತ್ತಿಲ್ಲ.). ಇಲ್ಲಿ ನಾನು ಬಾಳೆಕಾಯಿ, ಸವತೆಕಾಯಿ, ಬದನೆಕಾಯಿ, ಬಟಾಟೆ, ಹಾಗಲಕಾಯಿ, ಮೆಂತೆಸೊಪ್ಪು, ಬೀಟ್ರೂಟು - ಈ ಕಾಯಿಪಲ್ಲೆಗಳ ಹಶಿಯ ತಯಾರಿಕಾ ವಿಧಾನವನ್ನು ಹೇಳುತ್ತಿದ್ದೇನೆ. ಇವೆಲ್ಲಾ ತಯಾರಿಸಲು ಬಲು ಸುಲಭ, ಸರಳ, ತುಂಬಾ ರುಚಿಕರ, ಆರೋಗ್ಯಕ್ಕೂ ಹಿತಕರ. ಮಾಡಲು ಬೇಕಾಗುವ ಸಾಮಗ್ರಿಗಳೂ ಅತ್ಯಲ್ಪ. ನೀವೂ ಮಾಡಿ, ತಿಂದು, ಹೇಗಿತ್ತು ಎಂದು ಹೇಳಿದರೆ ಹೇಳಿಕೊಟ್ಟ ನನಗೆ ಗುರು ದಕ್ಷಿಣೆ ಸಂದಾಯ ;)

ಹಶಿಗಳ ಪಟ್ಟಿ ತುಸು ಉದ್ದವಿರುವುದರಿಂದ ಇದನ್ನು ಭಾಗ ಒಂದು ಹಾಗೂ ಎರಡರಲ್ಲಿ ವಿಂಗಡಿಸಿದ್ದೇನೆ.

ಭಾಗ -೧

ಸೂಚನೆ: ೧) ಇಲ್ಲಿ ೪-೫ ಜನರಿಗೆ ಸಾಕಾಗುವಷ್ಟು ಪ್ರಮಾಣವನ್ನು ಕೊಡಲಾಗಿದೆ.
 ೨) ಇಲ್ಲಿ ಹೇಳಿರುವ ಎಲ್ಲಾ ಹಶಿಗಳಿಗೂ ಸ್ವಲ್ಪ (ಒಂದು ಮುಷ್ಟಿಯಷ್ಟು) ಕಾಯಿಯನ್ನು ರುಬ್ಬಿ ಹಾಕುತ್ತೇವೆ. ಆದರೆ ಅದು ಅತ್ಯವಶ್ಯಕ ಅಲ್ಲ. ತೆಂಗಿನ ಕಾಯಿ ಇಲ್ಲದೇ ಬರೀ ಮೊಸರಿನಲ್ಲಿ ಮಾಡಿದರೂ ಬಲು ರುಚಿಯಾಗಿರುತ್ತದೆ. ಕೆಲವೊಮ್ಮೆ ಮೊಸರು ಇಲ್ಲದಿದ್ದಾಗ ಬರೀ ಅರ್ಧ ಕಡಿ ಕಾಯಿಯನ್ನೇ ಬೀಸಿ ಹಾಕುವುದೂ ಇದೆ. ಸಾಮಾನ್ಯವಾಗಿ ಮೊಸರು + ತುಸು ಕಾಯಿ ಇದ್ದರೆ ಚೆನ್ನ.  ಅವರವರ ರುಚಿಗೆ ಬಿಟ್ಟಿದ್ದು. ಪ್ರಸ್ತುತ ಇಲ್ಲಿ ತೆಂಗಿನ ತುರಿ ನಾನು ಬಳಸಿಲ್ಲ. ನೀವು ಬೇಕಿದ್ದರೆ ತೆಂಗಿನ ತುರಿಯನ್ನೂ ಬೀಸಿ ಮೊಸರಿಗೆ ಮಿಶ್ರಮಾಡಬಹುದು ಇಲ್ಲಾ ಮೊಸರು ತೀರಾ ಕಡಿಮೆ ಇದ್ದಲ್ಲಿ, ತೆಂಗಿನ ತುರಿಯನ್ನೇ ಜಾಸ್ತಿ ರುಬ್ಬಿ ತೆಂಗಿನ ಹಾಲನ್ನು ಜಾಸ್ತಿ ಹಾಕಬಹುದು. ತೆಂಗಿನ ಹಾಲು ಹಾಕಿದರೆ ಬೇರೆಯೇ ರುಚಿ ಸಿಗುತ್ತದೆ. ಅದೂ ಬಲು ಚೆನ್ನಾಗಿಯೇ ಇರುತ್ತದೆ.

೧) ಬಾಳೆಕಾಯಿ ಹಶಿ


ಬೇಕಾಗುವ ಸಾಮಗ್ರಿಗಳು :-

* ಎರಡು ಮಧ್ಯಮ ಗಾತ್ರದ ಬಾಳೇಕಾಯಿ (ತೀರಾ ದೊಡ್ಡದಿದ್ದರೆ ಒಂದೇ ಸಾಕು ನಾಲ್ಕು ಜನರಿಗೆ)
* ಈರುಳ್ಳಿ - ದೊಡ್ಡದಾದರೆ ಒಂದು, ಚಿಕ್ಕದಿದ್ದಲ್ಲಿ ಎರಡು
* ರುಚಿಗೆ ತಕ್ಕಷ್ಟು ಉಪ್ಪು
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಇಂಗು, ಹಸಿ ಮೆಣಸು ಅಥವಾ ಒಣ ಕೆಂಪು ಮೆಣಸು (ಖಾರಕ್ಕೆ ತಕ್ಕಂತೇ)
* ದಪ್ಪ ಮೊಸರು - ೪-೫ ಸೌಟು
* ತುಸು ನೀರು (ಬೇಕಿದ್ದಲ್ಲಿ)

ಮಾಡುವ ವಿಧಾನ

* ಮೊದಲು ಬಾಳೇಕಾಯಿಗಳ ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ
* ಅದಕ್ಕೆ ತುಸು ಉಪ್ಪು ಹಾಕಿ ಬೇಯುವಷ್ಟು ನೀರು ಸುರಿದು ಗ್ಯಾಸಿನಲ್ಲಿ ಬೇಯಿಸಿಕೊಳ್ಳಿ. ಬಾಳೆಕಾಯಿ ಬಹು ಬೇಗನೆ ಐದು ನಿಮಿಷದೊಳಗೆ ಬೆಂದು ಹೋಗುವುದು.
* ಬೆಂದ ಬಾಳೆಕಾಯಿಯನ್ನು ತಣಿಯಲು ಬಿಡಿ. ಅದು ತಣಿದ ಮೇಲೆ ಬೇಕಿದ್ದರೆ ರುಬ್ಬಿದ ಕಾಯಿ ಹಾಲು + ಮೊಸರು ಸೇರಿಸಿ. ಇಲ್ಲಾ ಹಾಗೇ ಮೊಸರನ್ನು ಹಾಕಿ. ಕಾಯಿ ಹಾಲು ಹಾಕುವುದಿದ್ದರೆ ಮೊಸರಿನ ಪ್ರಮಾಣ ಕಡಿಮೆ ಮಾಡಿ.
* ಉಪ್ಪಿನ ಹದ ನೋಡಿ, ಬೇಕಿದ್ದಲ್ಲಿ ತುಸು ಸೇರಿಸಿಕೊಳ್ಳಿ. ಈ ಮಿಶ್ರಣಕ್ಕೆ ಈರುಳ್ಳಿಗಳನ್ನು ಚಿಕ್ಕದಾಗಿ  ಹೆಚ್ಚಿ ಹಾಕಿ.
* ತದನಂತರ ಮೇಲೆ ಹೇಳಿದ ಪದಾರ್ಥಗಳಿಂದ ಒಗ್ಗರಣೆ ಕೊಟ್ಟು ಮುಚ್ಚಿಡಿ. ಖಾರ ಪ್ರಿಯರಾಗಿದ್ದರೆ ಹಸಿಮೆಣಸು ಅಥವಾ ಒಣಮೆಣಸನ್ನು ಹೆಚ್ಚು ಬಳಸಬಹುದು. ಇನ್ನು ಹಶಿ ತೀರಾ ದಪ್ಪಗಿದೆ ಎಂದೆನಿಸಿದರೆ ತುಸು ನೀರನ್ನು ಬೆರೆಸಬಹುದು.

ಬಿಸಿ ಬಿಸಿ ಅನ್ನಕ್ಕೆ ಗಟ್ಟಿಯಾಗಿ ಹಶಿಯನ್ನು ಕಲಸಿ ತಿಂದರೆ ಬೇರೇನೂ ಪದಾರ್ಥ ಬೇಕಾಗದು.

~~~~~

೨) ಸವತೆಕಾಯಿ ಹಶಿ


ಬೇಕಾಗುವ ಸಾಮಗ್ರಿಗಳು :-

* ಎರಡು ಮಧ್ಯಮ ಗಾತ್ರದ ಸವತೆಕಾಯಿ (ತೀರಾ ಚಿಕ್ಕದಿದ್ದಲ್ಲಿ ಮೂರೂ ಹಾಕಬಹುದು.)
*  ರುಚಿಗೆ ತಕ್ಕಷ್ಟು ಉಪ್ಪು
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಇಂಗು, ಹಸಿ ಮೆಣಸು ಅಥವಾ ಒಣ ಕೆಂಪು ಮೆಣಸು (ಖಾರಕ್ಕೆ ತಕ್ಕಂತೇ), ಚಿಟಿಕೆ ಅರಿಶಿನ.
* ದಪ್ಪ ಮೊಸರು - ೪-೫ ಸೌಟು

ಮಾಡುವ ವಿಧಾನ

* ಇದು ಮತ್ತೂ ಸರಳವಾಗಿದೆ. ಮೊದಲು ಸವತೆಯಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಸಿಪ್ಪೆ ಬೇಡದಿದ್ದರೆ, ಅದನ್ನು ಮೇಲಿಂದ ಚೂರು ತೆಗೆದುಕೊಳ್ಳಬಹುದು. ಸವತೆಯ ತುತ್ತ ತುದಿಯನ್ನು ಸ್ವಲ್ಪ ತೆಗೆದು ರುಚಿ ನೋಡಿಕೊಳ್ಳಿ. ಒಮ್ಮೊಮ್ಮೆ ಸವತೆಕಾಯಿ ಬಲು ಕಹಿಯಾಗಿರುತ್ತದೆ. ಕಹಿಯಿಲ್ಲದಿದ್ದಲ್ಲಿ ಚಿಕ್ಕದಾಗಿ ಹೆಚ್ಚಿಕೊಳ್ಳಿ.
* ಬಾಣಲೆಗೆ ಎಣ್ಣೆ ಹಾಕಿ ಮೇಲೆ ಹೇಳಿದ ಪದಾರ್ಥಗಳಿಂದ ಒಗ್ಗರಣೆ ಹಾಕಿಕೊಳ್ಳಿ.
* ಇನ್ನೇನು ಒಗ್ಗರಣೆ ಬೆಂದಿತು ಎನ್ನುವಾಗ ಚಿಟಿಕೆ ಅರಿಶಿನ ಹಾಕಿ, ಹೆಚ್ಚಿದ ಸವತೆಯನ್ನೂ ಹಾಕಿ ಚೆನ್ನಾಗಿ ಒಮ್ಮೆ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ ಬಿಡಿ. ಒಂದೊಮ್ಮೆ ನಿಮಗೋ, ನಿಮ್ಮ ಮಕ್ಕಳಿಗೋ ಶೀತವಿದ್ದಲ್ಲಿ, ತುಸು ಹೊತ್ತು ಹೆಚ್ಚು ಸವತೆಯನು ಬಿಸಿಯಲ್ಲೇ ಬಾಡಿಸಿದರೆ, ಅದರ ಶೀತದ ಅಂಶ ಹೋಗಿ ಹೆಚ್ಚು ತೊಂದರೆ ಆಗದು. ಇಲ್ಲದಿದ್ದರೆ ಹೆಚ್ಚು ಬಾಡಿಸಬೇಕೆಂದಿಲ್ಲ.
* ಒಗ್ಗರಿಸಿದ ಸವತೆ ಮಿಶ್ರಣ ಸಂಪೂರ್ಣ ತಂಪಾದ ಮೇಲೆ ಅದಕ್ಕೆ ಮೊಸರನ್ನು ಹಾಕಿ, ಉಪ್ಪು ಬೇಕಿದ್ದಲ್ಲಿ ಸೇರಿಸಿ ಊಟದ ಜೊತೆ ಸವಿಯಿರಿ. (ಇಲ್ಲೂ ಕಾಯಿ ಹಾಲು ಬೇಕಿದ್ದಲ್ಲಿ ಹಾಕಿಕೊಳ್ಳಬಹುದು.)
ಸವತೆಯಲೇ ನೀರಿನಂಶ ಧಾರಾಳವಿರುವುದರಿಂದ ಇದಕ್ಕೆ ಮತ್ತೆ ನೀರು ಸೇರಿಸುವ ಅಗತ್ಯವಿರುವುದಿಲ್ಲ.

~~~~

೩) ಬದನೆಕಾಯಿ ಹಶಿ


 ಬೇಕಾಗುವ ಸಾಮಗ್ರಿಗಳು :-

* ಎರಡು ಮಧ್ಯಮ ಗಾತ್ರದ ಬದನೆಕಾಯಿ (ತೀರಾ ದೊಡ್ಡದಿದ್ದರೆ ಒಂದೇ ಸಾಕು.. ತುಂಬಾ ಚಿಕ್ಕದಿದ್ದರೆ ನಾಲ್ಕೈದು ಬೇಕು)
* ಈರುಳ್ಳಿ - ತುಂಬಾ ದೊಡ್ಡದಾದರೆ ಒಂದು, ಚಿಕ್ಕದಿದ್ದಲ್ಲಿ ಎರಡು
* ರುಚಿಗೆ ತಕ್ಕಷ್ಟು ಉಪ್ಪು
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಇಂಗು, ಹಸಿ ಮೆಣಸು ಅಥವಾ ಒಣ ಕೆಂಪು ಮೆಣಸು (ಖಾರಕ್ಕೆ ತಕ್ಕಂತೇ), ಚಿಟಿಗೆ ಅರಿಶಿನ
* ದಪ್ಪ ಮೊಸರು - ೪-೫ ಸೌಟು
* ತುಸು ನೀರು (ಬೇಕಿದ್ದಲ್ಲಿ)

ತಯಾರಿಸುವ ವಿಧಾನ

ಬದನೆಕಾಯಿ ಹಶಿಯನು ನಾವು ಎರಡು ವಿಧದಲ್ಲಿ ಮಾಡುತ್ತೇವೆ.

ವಿಧಾನ ೧ :-

* ಬದನೆಕಾಯಿಯನ್ನು ತೊಳೆದು, ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಹೆಚ್ಚಿಕೊಂಡ ಬದನೆಕಾಯಿಯನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಸಿಟ್ಟಿರಿ. ಹೀಗೆ ಮಾಡುವುದರಿಂದ ಬದನೇಕಾಯಿ ಕಪ್ಪಾಗುವುದನ್ನು ತಡೆಯಬಹುದು ಮತ್ತು ಅದರ ಚೊಗರಿನ ರುಚಿಯೂ ಮಾಯವಾಗುವುದು.
* ನೀರಿನಲ್ಲಿ ನೆನೆಸಿಟ್ಟಿ ಬದನೆ ಚೂರುಗಳನ್ನು ಹಿಂಡಿ ತೆಗೆದು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. (ನೆನೆಸಿಟ್ಟ ನೀರನ್ನು ಚೆಲ್ಲಬೇಕು.) ಅದಕ್ಕೆ ಬೇಯಲಷ್ಟೇ ಸಾಕಾಗುವಷ್ಟು ನೀರನ್ನು ಸೇರಿಸಿ, ಇದಕ್ಕೆ ತುಸು ಉಪ್ಪು ಹಾಕಿ ಗ್ಯಾಸಿನಲ್ಲಿ ಬೇಯಿಸಿಕೊಳ್ಳಿ.
* ಬೇಯಿಸಿಕೊಂಡ ಮಿಶ್ರಣವು ತಣಿದ ಮೇಲೆ ಅದಕ್ಕೆ ಕಾಯಿ ಹಾಲು (ಬೇಕಿದ್ದರೆ), ಮೊಸರು ಹಾಗೂ ಈರುಳ್ಳಿ ಹೆಚ್ಚಿ ಹಾಕಿ ಚೆನ್ನಾಗಿ ಕಲಸಿ.
* ಈ ಮಿಶ್ರಣಕ್ಕೆ ಮೇಲೆ ಹೇಳಿದ ಪದಾರ್ಥಗಳಿಂದ ಒಗ್ಗರಣೆ ಕೊಟ್ಟರೆ ರುಚಿ ಶುಚಿಯಾದ ಹಶಿ ರೆಡಿ.

ವಿಧಾನ - ೨

* ಬದನೆಕಾಯಿಯನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಿ. ಹೆಚ್ಚಿಟ್ಟಿದ್ದಕ್ಕೆ ತುಸು ಉಪ್ಪು ಹಾಗೂ ಅರಿಶಿನ ಹಾಕಿ ತುಸು ಹೊತ್ತು ಕಲಸಿಡಿ. (ನೀರು ಹಾಕಬೇಡಿ. ಉಪ್ಪು ಕರಗಿ ನೀರಾಗಿ ಚೊಗರನ್ನು ತೆಗೆಯುವುದರಿಂದ, ನೀರು ಅನಗತ್ಯ. ಅಲ್ಲದೇ ತದನಂತರ ಹುರಿಯಬೇಕಾಗಿರುವುದರಿಂದ ನೀರಿನಂಶವಿರಬಾರದು)
* ಬಾಣಲೆಗೆ ಎಣ್ಣೆ ಹಾಕಿ ಉದ್ದಿನ ಬೇಳೆ, ಸಾಸಿವೆ, ಹಸಿಮೆಣಸು ಅಥವಾ ಒಣಮೆಣಸು, ಇಂಗು ಹಾಕಿ ಒಗ್ಗರಿಸಿಕೊಳ್ಳಿ. (ಈ ಒಗ್ಗರಣೆಗೆ ಅರಿಶಿನ ಬೇಡ.. ಮೊದಲೇ ಮೇಲೆ ಹಾಕಿರುವುದರಿಂದ)
* ಒಗ್ಗರಣೆ ಬೆಂದಂತೇ ಉಪ್ಪು+ಅರಿಶಿನ ಹಾಕಿಟ್ಟ ಬದನೆಕಾಯಿ ಚೂರುಗಳನ್ನು ಹಿಂಡಿ ಒಗ್ಗರಣೆಗೆ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. (ಇಲ್ಲಿ ಹುರಿಯುವುದು ಇರುವುದರಿಂದ ಒಗ್ಗರಣೆಗೆ ತುಸು ಜಾಸ್ತಿ ಎಣ್ಣೆ ಬೇಕಾಗುವುದು. ನೆನಪಿರಲಿ.)
* ಬದನೆಕಾಯಿ ಚೂರುಗಳು ಒಗ್ಗರಣೆಯಲ್ಲೇ ಹುರಿದು ಬೆಂದ ಮೇಲೆ ಸಂಪೂರ್ಣ ತಣಿಯಲು ಬಿಡಿ.
* ಈ ಮಿಶ್ರಣಕ್ಕೆ ಮೊಸರು, ಈರುಳ್ಳಿ, ಬೇಕಿದ್ದರೆ ತೆಂಗಿನ ತುರಿ ಬೀಸಿದ ಕಣಕು ಹಾಕಿ, ಉಪ್ಪು ಬೇಕಿದ್ದಲ್ಲಿ ಅದನ್ನೂ ಸೇರಿಸಿ, ದಪ್ಪಗಾಗಿದ್ದಲ್ಲಿ ನೀರನ್ನೂ ಹಾಕಿಕೊಂಡು ಚೆನ್ನಾಗಿ ಕಲಸಿ. ಬಿಸಿ ಬಿಸಿ ಅನ್ನಕ್ಕೆ ಹತ್ತಕೆ (ಗಟ್ಟಿಯಾಗಿ) ಕಲಸಿ ತಿಂದರೆ ಕೈ ಚಪ್ಪರಿಸುವುದು. ಖಾರ ಬೇಕಾದವರು ತುಸು ಹೆಚ್ಚು ಮೆಣಸನ್ನು ಒಗ್ಗರಣೆಗೆ ಸೇರಿಸಿಕೊಳ್ಳಬಹುದು.

ಸೂಚನೆ :-  ಈ ಮೇಲಿನ ಎರಡು ವಿಧಾನಗಳಲ್ಲದೇ, ಇನ್ನೂ ಒಂದು ವಿಧಾನವಿದೆ. ಬದನೇಕಾಯಿ ಉದ್ದ ಗಾತ್ರದಲ್ಲಿದ್ದರೆ, ಗ್ಯಾಸಿನಲ್ಲಿಟ್ಟು ಬೇಯಿಸಿಕೊಳ್ಳುವುದು. (ಬೇಯಿಸಲಿಡುವ ಮುನ್ನ ಅದಕ್ಕೆ ನಾಲ್ಕೈದು ಕಡೆ ತೂತು ಮಾಡುವುದು. ಇದರಿಂದ ಅದು ಚೆನ್ನಾಗಿ ಬೇಯುವುದು). ಬದನೆಕಾಯಿ ಚೆನ್ನಾಗಿ ಬೆಂದ ಮೇಲೆ ಅದರ ಸಿಪ್ಪೆ ಸುಲಿದು ಸೌಟಲ್ಲಿ ಅದನ್ನು ಕೊಚ್ಚಿ, ಪೇಸ್ಟ್ ತರಹ ಮಾಡಿ, ಆ ಮಿಶ್ರಣಕ್ಕೆ ಈರುಳ್ಳಿ, ಮೊಸರು, ಉಪ್ಪು ಹಾಕಿ ಮೇಲಿನ ಒಗ್ಗರಣೆ ಸಾಮಗ್ರಿಗಳಿಂದ ಒಗ್ಗರಿಸಿದರೆ ಇದು ಬೇರೆಯೇ ಒಂದು ಟೇಸ್ಟ್ ನೀಡುವುದು. ಸುಟ್ಟ ಬದನೆಕಾಯಿ ಹಶಿ ಎಂದೇ ಪ್ರಸಿದ್ಧಿಯೂ ಇದೆ :)

ನೆನಪಿರಲಿ :- ಪ್ರತಿಯೊಂದು ಹಶಿಗೂ ಅದನ್ನು ಹುರಿದೋ ಇಲ್ಲಾ ಬೇಯಿಸಿಯೋ ಮಾಡುವಾಗ, ಅದು ಸಂಪೂರ್ಣ ತಣಿದ ವಿನಃ ಮೊಸರು+ಕಾಯಿ ಸೇರಿಸಬೇಡಿ. ಬಿಸಿ ಇರುವಾಗಲೇ ಸೇರಿಸಿದರೆ ತುಸು ಅಡ್ಡ ವಾಸನೆ ಹೊಂದಿ ಕೆಡುವ ಸಂಭವ ಹೆಚ್ಚಾಗುವುದು.

ಸರಿ.. ಈಗ ಇವಿಷ್ಟು ಹಶಿಯನ್ನು ಈ ವಾರದಲ್ಲಿ ಮಾಡಿ ತಿಂದು ತೇಗಿ, ರಿಸಲ್ಟ್ ನನಗೆ ಕೊಟ್ಟ ಮೇಲೆ ಭಾಗ -೨ ನ್ನು ರಿಲೀಸ್ ಮಾಡಲಾಗುವುದು. :)

ಚಿತ್ರಗಳ ಕೃಪೆ : ಗೂಗಲಣ್ಣ.

~ತೇಜಸ್ವಿನಿ ಹೆಗಡೆ


Tuesday, June 30, 2015

ರುಚಿಕರ ಹಾಗೂ ಆರೋಗ್ಯಕರವಾದ ಗೋಧಿ ಹಪ್ಪಳ


ಇದು ನನ್ನಮ್ಮನ ಸ್ಪೆಷಲ್ ರೆಸೆಪಿ :) ಮೈದಾ ಹಿಟ್ಟು ಯಾವುದೇ ಕಾರಣಕ್ಕೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಹಪ್ಪಳಕ್ಕೆ ಉದ್ದೂ ಬೇಕಾಗಿಲ್ಲ. ಹಾಗಾಗಿ ತಯಾರಿಸಲೂ ಸುಲಭ, ಆರೋಗ್ಯಕ್ಕೂ ಹಿತರ, ತಿನ್ನಲೂ ಬಲು ರಿಚಿಕರವಾದ ಹಪ್ಪಳವಿದು. ಇಷ್ಟವಾದವರು, ಹಪ್ಪಳ ತಯಾರಿಸಿ ತಿಂದು ನಿಮ್ಮ ಅನುಭವವನ್ನು ಹಂಚಿಕೊಂಡರೆ ನನಗೂ ಬಲು ಸಂತಸವಾಗುವುದು :)

Copyright - Tejaswini Hegde

ಬೇಕಾಗುವ ಸಾಮಗ್ರಿಗಳು

೧) ಗೋಧಿ ಹಿಟ್ಟು - (ನಾನು ಬಳಸಿದ್ದು ಆಶೀರ್ವಾದ್ ಗೋಧಿ ಹಿಟ್ಟು.. ಲೂಸ್ ಪ್ಯಾಕೆಟ್ ಆಗಿದ್ರೆ ಏನಾದ್ರೂ ಬೆರಕೆ ಮಾಡಿರುವ ಸಾಧ್ಯತೆ ಇರುವುದರಿಂದ ಹೇಗಾಗುವುದೋ ತಿಳಿಯದು.). ೧/೨ ಕೆ.ಜಿ.
೨) ಜೀರಿಗೆ - ದೊಡ್ಡ ಚಮಚವಾದರೆ ೧ ಚಮಚ. ಟೀ ಸ್ಪೂನ್ ಆದರೆ ೨ ಚಮಚ
೩) ಓಂ ಕಾಳು - ೧/೨ ಚಮಚ.
[ಒಂದೊಮ್ಮೆ ಜೀರಿಗೆ ಇಷ್ಟ ಪಡದವರು ಕೇವಲ ಓಂ ಕಾಳು ಮಾತ್ರ ಉಪಯೋಗಿಸುವಂತಿದ್ದರೆ ದೊಡ್ಡ ಚಮಚವಾದರೆ ೧ ಚಮಚ ಇಲ್ಲಾ ಟೀ ಸ್ಪೂನ್ ಆದರೆ ೨ ಚಮಚ ಉಪಯೋಗಿಸಿ.)
೪) ಅಚ್ಚ ಖಾರದ ಪುಡಿ - ಖಾರಕ್ಕೆ ತಕ್ಕಷ್ಟು
೫) ಉಪ್ಪು- ರುಚಿಗೆ ತಕ್ಕಷ್ಟು
೭) ಸಕ್ಕರೆ (ಬೇಕಿದ್ದರ ಮಾತ್ರ) - ೧/೨-೧ ಟೀ ಸ್ಪೂನ್.
೬) ನೀರು - ಹಿಟ್ಟನ್ನು ಕಲಸುವಾಗ ಅದು ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ಬರಬೇಕು. ಗಂಟು ಗಂಟಾಗದಂತೇ ಆ ಹದದಲ್ಲಿ ಕಲಸುವಷ್ಟು ನೀರು ಹಾಕಿಕೊಳ್ಳಿ. ಸ್ವಲ್ಪ ಸ್ವಲ್ಪ ಸೇರಿಸುತ್ತಾ ಹೋಗಬೇಕು.
೭) ಕೊಬ್ಬರಿ ಎಣ್ಣೆ ಅಥವಾ ಯಾವುದೇ ಅಡುಗೆ ಎಣ್ಣೆ - ಕೈಗಳಿಗೆ ಸವರಿಕೊಳ್ಳುವಷ್ಟು.

ಮಾಡುವ ವಿಧಾನ

* ಮೊದಲಿಗೆ ಒಂದು ಅಗಲವಾದ ಬಾಣಲೆಯಾಕಾರದ ಪಾತ್ರೆಯೊಳಗೆ ಗೋಧಿ ಹಿಟ್ಟನ್ನು ಹಾಕಿಕೊಳ್ಳಿ. ಇದಕ್ಕೆ ಖಾರದ ಪುಡಿ, ಉಪ್ಪು, ಓಂಕಾಳು, ಜೀರಿಗೆ (ಜೀರಿಗೆ ಬೇಡದವರು ಮೇಲೆ ಹೇಳಿರುವಂತೇ ಬರಿಯ ಓಂಕಾಳು ಸೇರಿಸಬಹುದು.), ಸಕ್ಕರೆ - ಇವುಗಳನ್ನೆಲ್ಲಾ ಸೇರಿಸಿ.

* ಈ ಮಿಶ್ರಣಕ್ಕೆ ಮೇಲೆ ಹೇಳಿರುವಂತೇ ಸ್ವಲ್ಪ ಸ್ವಲ್ಪವೇ ನೀರುನ್ನಾ ಸೇರಿಸುತ್ತಾ, ಗಂಟು ಗಂಟಾಗದಂತೇ ಕದಡುತ್ತಾ ಉದ್ದಿನ ದೋಸೆ ಹಿಟ್ಟಿನ ಹದಕ್ಕೆ ತನ್ನಿ.

* ಚೆನ್ನಾಗಿ ಕದಡಿರುವ ಈ ಮಿಶ್ರಣವನ್ನು ಒಂದು ಬಟ್ಟಲಿಗೆ ಹೊಯ್ದು, ಇಡ್ಲಿ ದಳ್ಳೆಯಲ್ಲಿಟ್ಟು ೨೦-೩೦ ನಿಮಿಷಗಳವರೆಗೆ ಬೇಯಿಸಿ.

* ಚೆನ್ನಾಗಿ ಬೆಂದ ಹಿಟ್ಟನ್ನು, ನಾವು ಕೈಯಾಡಿಸುವಷ್ಟು ಬಿಸಿ ಇರುವಾಗಲೇ ಸ್ವಲ್ಪ ಸ್ವಲ್ಪ ದಳ್ಳೆಯಿಂದ ತೆಗೆದು (ಒಂದೇ ಸಲ ಎಲ್ಲಾ ಹಿಟ್ಟನ್ನು ಹೊರ ತೆಗೆದಿಟ್ಟುಕೊಂಡರೆ, ಗಾಳಿಯಾಡಿ ಹಿಟ್ಟು ತಣ್ಣಗಾಗಿ, ಗಟ್ಟಿಯಾಗಿ ಬಿಡುತ್ತದೆ.) ಚೆನ್ನಾಗಿ ನಾದಿಕೊಳ್ಳಬೇಕು.

Copyright - Tejaswini Hegde
* ಕೈಗಳಿಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನೋ ಇಲ್ಲಾ ನೀವು ಬಳಸುವ ಯಾವುದೇ ಅಡುಗೆಯ ಎಣ್ಣೆಯನ್ನೂ ತುಸು ಸವರಿಕೊಳ್ಳಿ. ನಾದಿದ ಹಿಟ್ಟನ್ನು ಪುರಿ/ಚಪಾತಿ ಹಿಟ್ಟಿನ ಉಂಡೆಯಂತೇ ಸಣ್ಣ ಉಂಡೆಗಳನ್ನಾಗಿಸಿ, ಪುರಿಗೆ ಲಟ್ಟಿಸುವಷ್ಟು ದೊಡ್ಡದಾಗಿ ಲಟ್ಟಿಸಿ. (ಚಿತ್ರದಲ್ಲಿ ತೋರಿಸಿದಷ್ಟು ಗಾತ್ರದಲ್ಲಿ)

* ಈ ಲಟ್ಟಿಸಿದ ಹಪ್ಪಳಗಳನ್ನು ೨-೩ ಬಿಸಿಲಿಗೆ ಇಟ್ಟರೆ ಸಾಕಾಗುವುದು. ಚೆನ್ನಾದ ಬಿಸಿಲು ೨ ಸಿಕ್ಕರೂ ಸಾಕಾಗುತ್ತದೆ. ಮೊದಲ ದಿನವೇ ಅದು ಗರಿ ಗರಿಯಾಗಿ ಬಿಟ್ಟಿರುತ್ತದೆ (ಬಿಸಿಲು ೨-೩ ಗಂಟೆ ಸಿಕ್ಕರೂ..!).

* ಗರಿ ಗರಿಯಾದ ಹಪ್ಪಳಗಳನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ. ಮಳೆಗಾಲದಲ್ಲೋ ಇಲ್ಲಾ ಚಳಿಗಾಲದಲ್ಲೋ ಒಂದೊಂದೇ ಹಪ್ಪಳಗಳನ್ನು ಸುಟ್ಟು ಇಲ್ಲಾ ಕರಿದು ತಿಂದರೆ ಅದರ ಮಜವೇ ಬೇರೆ.

~ತೇಜಸ್ವಿನಿ ಹೆಗಡೆ.

Friday, October 04, 2013

ಬಟಾಟೆ ಖಾರಾ ತಾಳಿ

ಒಮ್ಮೊಮ್ಮೆ ಏನೂ ಮಾಡ್ಕೊಳೋದೇ ಬೇಡ ಅನ್ಸಿಬಿಡೊತ್ತೆ.... ಸುಮ್ಮನೇ ಕೂತು ಓದೋದೋ.. ಬಟ್ಟೆ ಮಡಚೋದೋ ಮಾಡ್ತಾ ಕುಂತ್ರೆ ತಿನ್ನೋದೂ ಬ್ಯಾಡ, ತಿನಿಸು ಮಾಡೋದೂ ಬ್ಯಾಡ ಅನ್ನಿಸಿ ಬಿಡೋತ್ತೆ ಅಲ್ವಾ? ಆದ್ರೆ ಹೊಟ್ಟೆ ಅನ್ನೋದು ಇದನ್ನೆಲ್ಲಾ ಕೇಳೋದೇ ಇಲ್ಲಾ. ಆವಾಗ ಮನೇಲಿ ಮೊಸರು ಇದ್ರೆ ಅನ್ನ ಒಂದು ಮಾಡ್ಕೊಳ್ಳಿ. ಆಮೇಲೆ ಬಟಾಟೆ ಇದ್ರೆ ಅದ್ರ "ಖಾರಾ ತಾಳಿ" ಒಂದು ಮಾಡಿಕೊಂಡ್ರೆ ಊಟದಿಂದ ಏಳಬೇಕೆಂದೇ ಅನಿಸುವುದಿಲ್ಲ. ಅನ್ನ ಕೂಗಿದ್ಮೇಲೆ ನೀವು ಮಾಡೋಕೆ ಹೊರಟ್ರೆ, ವಿಸಿಲ್ ತೆಗ್ಯೋದ್ರೊಳ್ಗೆ ಖಾರಾ ತಾಳಿ ರೆಡಿ ಆಗಿರೊತ್ತೆ. :)
Courtesy : Internet

ಬಟಾಟೆ ಖಾರಾ ತಾಳಿಗೆ ಬೇಕಾಗುವ ಸಾಮಾಗ್ರಿಗಳು :

೨ ಮಧ್ಯಮ ಗಾತ್ರದ ಬಟಾಟೆ
ರವೆ - ೨ ದೊಡ್ಡ ಚಮಚ.
ಮೆಣಸಿನ ಹುಡಿ - ಖಾರಕ್ಕೆ ತಕ್ಕ
ಉಪ್ಪು - ರುಚಿಗೆ ತಕ್ಕ
ತೆಂಗಿನೆಣ್ಣೆ

ಮಾಡುವ ವಿಧಾನ

೧. ಮೊದಲು ಬಟಾಟೆಯನ್ನು ತೊಳೆದು, ಸಿಪ್ಪೆ ತೆಗೆದು ಆದಷ್ಟು ತೆಳುವಾಗಿ ತಾಳಿ ಮಾಡಿಟ್ಟುಕೊಳ್ಳಿ.
೨. ಒಂದು ಬಟ್ಟಲಿಗೆ ರವೆ, ಉಪ್ಪು, ಖಾರ ಹಾಕಿ ಮಿಶ್ರಣ ಮಾಡಿ (ನೀರು ಹಾಕದೇ...) ಹುಡಿ ಮಿಶ್ರಣದ ಉಪ್ಪು, ಖಾರ ಸರಿಯಾಗಿದೆಯೇ ಎಂದು ನೋಡಿಕೊಳ್ಳಿ.
೩. ಮಾಡಿಟ್ಟ ಬಟಾಟೆ ತಾಳಿಗಳನ್ನು ಹುಡಿಯ ಮಿಶ್ರಣಕ್ಕೆ ಹುದುಗಿಸಿ, ತಾಳಿಯ ಎರೆಡೂ ಬದಿ ಹುಡಿ ಅಂಟಿಕೊಳ್ಳುವಂತೆ ಮಾಡಿ.
೪. ದೋಸೆ ಕಾವಲಿ ಇಟ್ಟು, ಹುಡಿ ಅಂಟಿದ ಬಟಾಟೆ ತಾಳಿಗಳನ್ನು ಬಿಸಿಯಾದ ಬಂಡಿಯ ಮೇಲಿಟ್ಟು ಎರಡೂ ಬದಿ ಎರಡೆರಡು ಹನಿ ಎಣ್ಣೆ ಬಿಟ್ಟು, ಹಾಗೇ ಮುಚ್ಚಿ ಬೇಯಿಸಿ.

ಬಿಸಿ ಬಿಸಿ ಖಾರ ತಾಳಿಯನ್ನು ಮೊಸರಿನೊಂದಿಗೆ ಸವಿಯುವ ಮಜ, ತಿಂದವರಿಗೆ ಮಾತ್ರ ಗೊತ್ತು. ಉಪ್ಪು, ಖಾರದ ಜೊತೆ ರವೆಯ ರುಚಿಯ ಸ್ವಾದವೇ ಬೇರೆ. ಬೆಂದ ನಂತರ ಖಾರಾ ತಾಳಿಗಳ ಘಮ್ಮನೆ ಕಂಪು ಹಸಿವಿಲ್ಲದವರ ಹಸಿವನ್ನೂ ಬಡಿದೆಬ್ಬಿಸಿದ್ದರೆ ಹೇಳಿ.

ಮಾಡಿ ನೋಡಿ... ನೋಡಿ ಹೇಳಿ :)

-ತೇಜಸ್ವಿನಿ.

Wednesday, August 21, 2013

ರುಚಿಕರ ಮತ್ತು ಆರೋಗ್ಯಕರ ಗೋಧಿ ಹಲ್ವ

ಗೋಧಿ ಹಲ್ವ ಆರೋಗ್ಯಕ್ಕೂ ಒಳ್ಳೆಯದು. ಬಾಯಿಗೂ ರುಚಿಕರ. ಮಾಡಲೂ ಸುಲಭ ಸರಳ. ಥಟ್ ಎಂದು ೧೫ ನಿಮಿಷದೊಳಗೆ ಒಂದು ಲೋಟ ಗೋಧಿ ಹಿಟ್ಟಿನ ಹಲ್ವವನ್ನು ತಯಾರಿಸಬಹುದು. ಬಿಲ್ಲೆಯಾಕಾರದಲ್ಲಿ ಕೊರೆದಿಟ್ಟುಕೊಂಡು, ಗಾಳಿಯಾಡದ ಡಬ್ಬದಲ್ಲಿಟ್ಟರೆ ೫-೬ ದಿನಗಳವರೆಗೂ ಚೆನ್ನಾಗಿರುತ್ತದೆ. ಇದನ್ನು ತಯಾರಿಸಲು ಬೇಕಾದ ಸಾಮಗ್ರಿಗಳೂ ಅತ್ಯಲ್ಪ. ಪಾಕವೊಂದು ಸರಿಯಾಗಿ ಆದರೆ ಮತ್ತೆಲ್ಲಾ ಅತಿ ಸುಲಭ.

ಬೇಕಾಗುವ ಸಾಮಗ್ರಿಗಳು 
Copy Right - Tejaswini 


ಗೋಧಿ ಹಿಟ್ಟು - ೧ ಲೋಟ
ತುಪ್ಪ - ೧/೪ ಲೋಟ
ಸಕ್ಕರೆ - ೧ ಲೋಟ
ನೀರು - ೧/೪ ಲೋಟ
ಏಲಕ್ಕಿ - ೬-೭ (ಪುಡಿ ಮಾಡಿಟ್ಟುಕೊಳ್ಳಬೇಕು.)
ಗೋಡಂಬಿ, ಧ್ರಾಕ್ಷಿ - ಬೇಕಾದ್ದಷ್ಟು. [ಹುರಿದೋ ಇಲ್ಲಾ ಹಾಗೆಯೋ ಹಾಕಿಕೊಳ್ಳಬಹುದು. ]
ಲವಂಗ - ೨ (ಇದನ್ನೂ ಏಲಕ್ಕಿಯ ಜೊತೆ ಪುಡಿಮಾಡಿಟ್ಟುಕೊಳ್ಳಬೇಕು.)

ಮಾಡುವ ವಿಧಾನ

* ಮೊದಲು ಗೋಧಿ ಹಿಟ್ಟನ್ನು ತುಪ್ಪದಲ್ಲಿ ಘಮ್ಮೆನ್ನುವಷ್ಟು ಚೆನ್ನಾಗಿ ಹುರಿದಿಟ್ಟುಕೊಳ್ಳಿ.

* ಇದಕ್ಕೆ ಹುಡಿಮಾಡಿಟ್ಟುಕೊಂಡ ಲವಂಗ, ಏಲಕ್ಕಿಪುಡಿಯನ್ನು ಹಾಕಿ ಒಮ್ಮೆ ತಿರುವಿ.

* ಸಕ್ಕರೆ + ತುಸು ನೀರನ್ನು ಒಲೆಯಲ್ಲಿಟ್ಟು ಸಣ್ಣ ಉರಿಯಲ್ಲಿ ಪಾಕಕ್ಕೆ ಇಡಿ. ಸಣ್ಣ ಒಲೆಯಲ್ಲೇ ಇಡಬೇಕು.. ಇಲ್ಲದಿದ್ದರೆ ಪಾಕ ಹೆಚ್ಚಾಗಬಹುದು. ಆಗಾಗ ಕಡದುತ್ತಿದ್ದು ಒಂದು ಹಂತದಲ್ಲಿ ಸಕ್ಕರೆ ಕರಗಿ ಕುದಿಯ ತೊಡಗುತ್ತದೆ (೩-೪ ನಿಮಿಷದೊಳಗೇ). ಆಗ ಪಾಕವಾಯಿತೆಂದು ನೋಡಲು ಒಂದು ಬಟ್ಟಲಲ್ಲಿ ನೀರು ತೆಗೆದುಕೊಂಡು ಅದಕ್ಕಿ ಒಂದು ಹನಿ ಪಾಕದ ರಸವನ್ನು ಹಾಕಿ. ಹಾಕಿದ ಹನಿ ಪಾಕವಾಗಿರದಿದ್ದರೆ ನೀರಿನಲ್ಲಿ ಹರಡಿ ಹೋಗುತ್ತದೆ. ಪಾಕವಾಗಿದ್ದರೆ ನೀರಿನ ತಳ ಸೇರಿ ಮುದ್ದೆಯಾಗುತ್ತದೆ.

* ಪಾಕವಾದ ಮೇಲೇ ತಕ್ಷಣ ಒಲೆ ಆರಿಸಿ. ಪಾಕವನ್ನು ತಕ್ಷಣ ಹುರಿದ ಗೋಧಿ ಹಿಟ್ಟಿನ ಮಿಶ್ರಣಕ್ಕೆ ಸುರಿದು ಚೆನ್ನಾಗಿ ತಿರುಗಿಸಿಕೊಳ್ಳಿ. ಸರಿಯಾಗಿ ಹದವಾದ ಕೂಡಲೇ ಮೊದಲೇ ತುಪ್ಪವನ್ನು ಒರೆಸಿಟ್ಟುಕೊಂಡಿದ್ದ ಬಟ್ಟಲಿಗೆ ಹೊಯ್ದು ಚೂರಿ, ಅಥವಾ ಚಮಚದಲ್ಲಿ ಬಿಲ್ಲೆಯಾಕಾರದಲ್ಲಿ ಕೊರೆದುಕೊಳ್ಳಿ. ಆರಿದ ಮೇಲೆ ಅದನ್ನು ತೆಗೆದು ಡಬ್ಬದಲ್ಲಿ ತುಂಬಿಸಿ.

ನೆನಪಿಡಿ. 
ಗೋಡಂಬಿ ಧ್ರಾಕ್ಷಿಯನ್ನು ಮೊದಲೇ ಹುರಿದ ಮಿಶ್ರಣಕ್ಕೆ ಹಾಕಬಹುದು, ಇಲ್ಲಾ ಪಾಕವನ್ನು ಹಾಕಿ ತಿರುವುವಾಗಲೂ ಹಾಕಬಹುದು.

ಸಕ್ಕರೆ ಪಾಕವಾದ ತಕ್ಷಣ ಗೋಧಿ ಹಿಟ್ಟಿಗೆ ಹಾಕಿ ಚೆನ್ನಾಗಿ ಕಲಸಬೇಕು. ತುಸು ತಡವಾದರೂ ಪಾಕ ಗಟ್ಟಿಯಾಗಿ ಮತ್ತೆ ಕರಗಿಸಬೇಕಾಗುತ್ತದೆ!

ಒಂದೊಮ್ಮೆ ಪಾಕ ಹೆಚ್ಚಾಗಿದ್ದರೆ ಚಮಚದಲ್ಲೇ ತಿಂದು ಬಿಡಿ :) ಹೇಗೆ ತಿಂದರೂ ರುಚಿ ಮಾತ್ರ ಒಂದೇ ತರಹ ಇದ್ದಿರುತ್ತದೆ.

ಈ ತಿನಿಸನ್ನು ಮಾಡಿದರೆ, ತಿಂದು ರುಚಿಯೆನಿಸಿದರೆ ನನ್ನೊಂದಿಗೆ ಸಿಹಿಯ ರುಚಿಯನ್ನೂ ಹಂಚಿಕೊಳ್ಳಿ :)

-ತೇಜಸ್ವಿನಿ.

Wednesday, August 14, 2013

ಜಿಟಿ ಜಿಟಿ ಮಳೆಗೆ ಹಸಿ ಬಿಸಿ ಈರುಳ್ಳಿ ಹಾಗೂ ಸಾಂಬ್ರಾಣಿ ಸೊಪ್ಪಿನ ತಂಬುಳಿಗಳು....

ಇನ್ನೇನು ಮಳೆ ಧೊಪ್ಪನೆ ಬೀಳೋ ತರಹ ಕಪ್ಪುಗಟ್ಟಿದೆ....  ಹೊರ ಬೀಸುವ ಮಳೆಯ ಚಳಿಗಾಳಿಯ ಜೊತೆ ಒಳಗೆ ಸುಟಿ ಸುಟಿ ಈರುಳ್ಳಿ ತಂಬುಳಿ ಇದ್ದುಬಿಟ್ಟರೆ....... ಸ್ವರ್ಗಕ್ಕೆ ಎರಡೇಗೇಣು ನೋಡಿ :)

ಮಧ್ಯಮಗಾತ್ರದ ಒಂದು ಪುಟ್ಟ ಈರುಳ್ಳಿ+ ಅರ್ಧ ಚಮಚ ಜೀರಿಗೆಯನ್ನು ೩=೪ ಚಮಚ ಕಾಯಿತುರಿಯೊಂದಿಗೆ ಹಸೀ ಬೀಸಿಕೊಳ್ಳಿ. ಇದಕ್ಕೆ ೨-೩ ಸೌಟು (ಬೇಕಿದ್ದರೆ ಎರಡು ಸೌಟು ಜಾಸ್ತಿ...:)) ಮಜ್ಜಿಗೆಯನ್ನು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಬೆರಸಿ. ದಪ್ಪಗಾಗಬೇಕೆಂದರೆ ಕಾಯಿತುರಿಯನ್ನೋ ಇಲ್ಲಾ ಮಜ್ಜಿಗೆಯನ್ನೋ ಜಾಸ್ತಿ ಹಾಕಬಹುದು. ತೆಳ್ಳಗೆ ಬೇಕೆನ್ನುವವರು ಸ್ವಲ್ಪ ನೀರನ್ನು ಬೆರೆಸಬಹುದು.

ತದನಂತರ ೧/೪ ಚಮಚ್ಚ ಸಾಸಿವೆ+ಒಂದು ಕಡ್ಡಿಮೆಣಸಿನ ಚೂರನ್ನು ಹಾಕಿ ತುಪ್ಪದಲ್ಲಿಯೋ ಇಲ್ಲಾ ಎಣ್ಣೆಯಲ್ಲಿಯೋ (೧/೨ ಚಮಚವೂ ಬೇಡ.. ಸಾಸಿವೆ ಚಟಗುಡುವಷ್ಟು ಹಾಕಿದರೆ ಸಾಕು..) ಒಗ್ಗರಿಸಿದರೆ ೫ ನಿಮಿಷದೊಳಗೆ ರುಚಿ ರುಚಿ, ಆರೋಗ್ಯಕರ ಈರುಳ್ಳಿ ತಂಬ್ಳಿ ರೆಡಿ :)

ಇದು ಶೀತ, ಕಫ, ಕೆಮ್ಮು, ಸ್ವಾದ ಕೆಟ್ಟಿದ್ದರೆ - ಎಲ್ಲವುದಕ್ಕೂ ರಾಮಬಾಣ.

ಇನ್ನು ತುಂಬಾ ಗಂಟಲು ಕೆರೆತ ಇದ್ದವರು, ಮಜ್ಜಿಗೆ ತಂಪು ಎಂದಾದಲ್ಲಿ ಹೀಗೆ ಮಾಡಿ: - 

ಈರುಳ್ಳಿ+ಜೀರಿಗೆ+ಕಾಯಿತುರಿ ಬೀಸಿದ ನಂತರ ತುಸುವೇ ನೀರನ್ನು ಹಾಕಿ ಒಲೆಯಲ್ಲಿಟ್ಟು ಒಂದು ಗುಳ್ಳೆಬರುವವರೆಗೆ ಬಿಸಿಮಾಡಿ (ನೆನಪಿಡಿ.. ಕುದಿಸಬೇಡಿ!). ಗ್ಯಾಸ್ ನಂದಿಸಿ ಮಜ್ಜಿಗೆ ಬೆರೆಸಿ, ಒಗ್ಗರಿಸಿದರೆ ಗಂಟಲು ಕೆರೆತ, ನೆಗಡಿ ಸಾಕಷ್ಟು ಶಮನವಾಗುವುದು.

$$$$$$$$$$$$$$$$$

ಸಾಂಬ್ರಾಣಿ ಸೊಪ್ಪಿನ ತಂಬುಳಿಯೂ ಶೀತ, ಕೆಮ್ಮಿಗೆ ತುಂಬಾ ಪರಿಣಾಮಕಾರಿ. ಅದರಲ್ಲೂ ಮಕ್ಕಳಿಗೆ ಶೀತವಿದ್ದಾಗ ಇದನ್ನು ಉಣಿಸುವುದು ಉತ್ತಮ.

೫-೬ ಸಾಂಬ್ರಾಣಿ ಸೊಪ್ಪುಗಳನ್ನು ಚೂರುಮಾಡಿಟ್ಟುಕೊಳ್ಳಬೇಕು. ಈ ಚೂರುಗಳನ್ನು ೨ ಚಮಚ ಬಿಳೇ ಎಳ್ಳು +೧/೨ ಚಮಚ ಜೀರಿಗೆ + ಚಿಟಿಕೆ ಇಂಗು - ಇವಿಷ್ಟನ್ನು ೧ ಚಿಕ್ಕ ಚಮಚ ತುಪ್ಪದಲ್ಲಿ ಹುರಿದು, ೩-೪ ಚಮಚ ಕಾಯಿತುರಿಯೊಂದಿಗೆ ಬೀಸಿ, ಮೇಲೆ ಹೇಳಿರುವಂತೇ ಬಿಸಿಮಾಡಿ, ಮಜ್ಜಿಗೆ ಬೆರೆಸಿದರೆ ಶೀತಕ್ಕೆ ಚಳಿಹಿಡಿಯುವುದು :)

----------

(ವಿ.ಸೂ... ಮೊಸರನ್ನು ಇಷ್ಟಪಡುವವರು..  ಮಜ್ಜಿಗೆಯ ಬದಲು ಮೊಸರನ್ನೂ ಉಪಯೋಗಿಸಬಹುದು.... ೨-೩ ಸೌಟು ಮೊಸರನ್ನೇ ಮಿಕ್ಸಿಯಲ್ಲಿ ಹಾಕಿ ಒಮ್ಮೆ ತಿರುಗಿಸಿದರೆ ಅದು ತೆಳ್ಳಗಾಗುತ್ತದೆ.. ಅದಕ್ಕೆ ನೀರು ಸ್ವಲ್ಪ ಸೇರಿಸಿ ಬೀಸಿದ ಮಿಶ್ರಣಕ್ಕೆ ಹಾಕಿ ಹದಮಾಡಬಹುದು.)

-ತೇಜಸ್ವಿನಿ

Thursday, March 14, 2013

ಬಿಸಿ ಬಿಸಿ ಬೇಸಿಗೆಗೆ ತಂಪು ತಂಪು ವಿವಿಧ ತಂಬುಳಿಗಳು...


ಬೇಸಿಗೆಯ ಧಗೆಯ ಅನುಭವ ಎಲ್ಲೆಡೆ ಈಗಾಗಲೇ ಶುರುವಾಗಿದೆ.. ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಮೋಡಗಟ್ಟಿದ ವಾತಾವರಣ ಒಳ-ಹೊರಗೆ ತಾಪ ಹೆಚ್ಚಿಸುತ್ತಿದೆ. ದೇಹದ ಉಷ್ಣತೆಯ ಹೆಚ್ಚಳದಿಂದಾಗಿ ಹತ್ತು ಹಲವು ಸಮಸ್ಯೆಗಳು ತಲೆದೋರುವುದು ಸಹಜ. ಹೀಗಿರುವಾಗ ತೆಳ್ಳಗೆ, ತಂಪಾಗಿರುವ ಪದಾರ್ಥವನ್ನು ಸೇವಿಸುವ ಮನಸ್ಸಾಗುವುದು. ನಮ್ಮಲ್ಲಿ ಅಂದರೆ ಹವ್ಯಕರಲ್ಲಿ ವಿವಿಧ ರೀತಿಯ ತಂಬುಳಿಗಳನ್ನು ಮಾಡುತ್ತಾರೆ. ಇವುಗಳನ್ನು ಹಾಗೇ ತಂಫು ಪಾನೀಯದಂತೆಯೋ ಇಲ್ಲಾ ಸೂಪ್‌ನಂತೆಯೋ ಕುಡಿಯಬಹುದು ಇಲ್ಲವೇ ಅನ್ನಕ್ಕೆ ಕಲಸಿ ತಿನ್ನಬಹುದು.

Copy Right : Tejaswini Hegde
ತಂಬುಳಿಗಳ ಉಪಯೋಗಗಳು : - 

೧. ದೇಹದ ಉಷ್ಣತೆಯು ಹೆಚ್ಚಾಗದಂತೇ ತಡೆಯುತ್ತವೆ... ಬಾಯಿ ಹುಣ್ಣು, ಕಣ್ಣುರಿ, ತಲೆ ಸಿಡಿತ, ಹೊಟ್ಟೆಯುರಿ, ಮಲಬದ್ಧತೆ, ಪಿತ್ಥ, ಗಾಸ್ಟ್ರಿಕ್ ಇಂತಹ ರೋಗಗಳಿಂದ ನಮ್ಮನ್ನು ದೂರವಿಡುತ್ತವೆ.

೨. ಕಣ್ಣಿಗೆ, ಉದರಕ್ಕೆ ತಂಪಲ್ಲದೇ ನೆತ್ತಿಗೂ ತಂಪು ತರುತ್ತವೆ. ಎದೆಯುರಿ ಹೆಚ್ಚಾಗಿದ್ದರೆ, ಈ ತಂಬುಳಿಗಳನ್ನು ಮಾಡಿ ಕುಡಿದರೆ ಬಹು ಬೇಗ ಶಮನವಾಗುತ್ತದೆ.

೩. ಆಯಾಸ ಹೆಚ್ಚಾದಾಗ, ಬಾಯಿರುಚಿ ಕೆಟ್ಟಿದೆ ಎಂದೆನಿಸಿದಾಗಲೂ ಇವು ಸಹಕಾರಿಯಾಗಿವೆ.

ಒಟ್ಟಿನಲ್ಲಿ ಬಹೋಪಯೋಗಿ ತಂಬುಳಿಗಳ ಸೇವನೆಯಿಂದ ಆರೋಗ್ಯವು ಸುಧಾರಿಸುವುದಲ್ಲದೇ ಸದೃಢವಾಗಿರುವುದು.


ಮಾಡಲು ಸುಲಭ, ಸರಳ, ಬೇಕಾಗುವ ಪದಾರ್ಥಗಳೂ ಅತ್ಯಂತ ಕಡಿಮೆ. ಆರೋಗ್ಯಕ್ಕೆ ಹಿತಕರ, ಬಾಯಿಗೂ ರುಚಿಕರ ತಂಬುಳಿಗಳನ್ನು ತಯಾರಿಸುವ ವಿಧಾನವೂ ಹೆಚ್ಚು ಕಡಿಮೆ ಒಂದೇ ರೀತಿಯದ್ದಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು - (೩-೪ ಜನರಿಗೆ) :-

ಒಂದು ಕಟ್ಟು ಮೆಂತೆ ಸೊಪ್ಪು/ ಪಾಲಕ್ ಸೊಪ್ಪು/ಅತ್ತಿ ಕುಡಿ (ಯಾವುದಾದರೂ ಒಂದು ಸಾಮಗ್ರಿ)

ಜೀರಿಗೆ - ೧ ಚಮಚ (ಟೇಬಲ್ ಸ್ಪೂನ್)
ಬಿಳೇ ಎಳ್ಳು - ೧/೨ ಚಮಚ
ಇಂಗು - ಒಂದೆರಡು ಕಾಳು...(ಪುಡಿಯಾಗಿದ್ದರೆ ಚಿಟಿಕೆ)
ತುಪ್ಪ ಅಥವಾ ಎಣ್ಣೆ - ೧ - ೨ ಚಮಚ. (ತುಪ್ಪದಲ್ಲಿ ಮಾಡಿದರೆ ಮತ್ತೂ ರುಚಿಕರ ಹಾಗೂ ಆರೋಗ್ಯಕ್ಕೂ ಉತ್ತಮ.)
ತೆಂಗಿನ ತುರಿ - ೪ ಚಮಚ
ಮಜ್ಜಿಗೆ ಅಥವಾ ಮೊಸರು  - ೩-೪ ಸೌಟು.
ಉಪ್ಪು - ರುಚಿಗೆ ತಕ್ಕಷ್ಟು.
ಬೆಲ್ಲ - 1-2 ಚಮಚ
------

ಮೆಂತೆಸೊಪ್ಪಿನ ತಂಬುಳಿ ಮಾಡುವ ವಿಧಾನ : ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಕತ್ತರಿಸಬೇಕು.

ಮೆಂತೆಸೊಪ್ಪಿನ ತಂಬುಳಿ ಮಾಡುವ ಮೊದಲುಸೊಪ್ಪನ್ನು ತೊಳೆದಮೇಲೆ ಹೆಚ್ಚಿ, ಸ್ವಲ್ಪ ಉಪ್ಪು ತಿಕ್ಕಿ ೧೦ ನಿಮಿಷ ಇಟ್ಟುಕೊಂಡಿರಬೇಕಾಗುತ್ತದೆ. (ಇದರಿಂದ ಕಹಿಯಂಶ ಕಡಿಮೆಯಾಗಿ ತಿನ್ನಲು ರುಚಿಕರವಾಗಿರುತ್ತದೆ. ಕಹಿ ಅಂಶ ಇಷ್ಟಪಡುವವರು ಹಾಗೇ ಮಾಡಿಕೊಳ್ಳಬಹುದು.)

ಬಾಣಲೆಗೆ ತುಪ್ಪ ಅಥವಾ ಎಣ್ಣೆ ಹಾಕಿ ಜೀರಿಗೆ + ಬಿಳೇ ಎಳ್ಳು +(ಈ ತಂಬುಳಿಗೆ ಬೇಕಿದ್ದರೆ ಮಾತ್ರ ಹಾಕಬಹುದು) ಚಿಟಿಕೆ ಇಂಗು - ಇವುಗಳನ್ನು ಹಾಗಿ ಒಗ್ಗರಿಸಿಕೊಂಡು, ಉಪ್ಪು ತಿಕ್ಕಿಟ್ಟಿದ್ದ ಮೆಂತೆ ಸೊಪ್ಪನ್ನು ಹಿಂಡಿ ಹಾಕಿ ಹುರಿಯಬೇಕು. ಕಹಿ ಬಿಟ್ಟಿರುವ ರಸವನ್ನು ಹಿಂಡಿ ಹಾಕುವುದರಿಂದ ತಿನ್ನುವಾಗ ಕಹಿಯೆನಿಸುವುದಿಲ್ಲ.

ಬಹು ಬೇಗ ಹುರಿದು ಬರುವ ಸೊಪ್ಪನ್ನು ತಣಿಯಲಿಡಬೇಕು. ನೆನಪಿಡಿ ಯಾವುದೇ ಸೊಪ್ಪಿರಲಿ.. ಹುರಿದು ಮಾಡುವಂಥದ್ದಾಗಿದ್ದರೆ, ಸಂಪೂರ್ಣ ತಣಿದ ಮೇಲೆ ಕಾಯಿಹಾಕಿ ರುಬ್ಬಬೇಕು.. ಬಿಸಿ ಇರುವಾಗಲೇ ರುಬ್ಬಿದರೆ ಕಸರು(ಕಮಟು) ವಾಸನೆ ಬರುತ್ತದೆ.

ತಣಿದ ಮೇಲೆ ಕಾಯಿತುರಿಯೊಂದಿಗೆ ನುಣ್ಣಗೆ ರುಬ್ಬಿ, ಮಜ್ಜಿಗೆ + ಉಪ್ಪು ಹಾಕಿ, ತೆಳ್ಳಗೆ ಬೇಕಿದ್ದರೆ ತುಸು ನೀರನ್ನೋ ಇಲ್ಲಾ ಮತ್ತೊಂದು ಸೌಟು ಮಜ್ಜಿಗೆಯನ್ನೋ ಹಾಕಿದರೆ ರುಚಿಕರ ಮೆಂತೆ ತಂಬುಳಿ ರೆಡಿ. ಸಿಹಿಯನ್ನು ಇಷ್ಟಪಡುವವರು... ಕಹಿಯೆನಿಸುವವರು... ಸ್ವಲ್ಪ ಬೆಲ್ಲವನ್ನು ಹಾಕಿ ಕರಗಿಸಿಕೊಳ್ಳಬಹುದು. ಮತ್ತಷ್ಟು ರುಚಿಕರವಾಗುತ್ತದೆ.

ವಿ.ಸೂ : - ೧. ಸೊಪ್ಪನ್ನು ತುಂಬಾ ಹೊತ್ತು ಉಪ್ಪಲ್ಲಿ ಹಾಕಿಡಬೇಡಿ.. ಅದರ ಕಹಿಯಂಶ ಸಂಪೂರ್ಣ ಹೋಗಿ, ಅದರೊಳಗಿನ ಉತ್ತಮ ಸತ್ವವೆಲ್ಲಾ ಉಪ್ಪಲ್ಲಿ ಕರಗಿಹೋಗಬಹುದು! 

೨. ಮಜ್ಜಿಗೆಯ ಬದಲು ಮೊಸರನ್ನೂ ಉಪಯೋಗಿಸಬಹುದು.... ೨-೩ ಸೌಟು ಮೊಸರನ್ನೇ ಮಿಕ್ಸಿಯಲ್ಲಿ ಹಾಕಿ ಒಮ್ಮೆ ತಿರುಗಿಸಿದರೆ ಅದು ತೆಳ್ಳಗಾಗುತ್ತದೆ.. ಅದಕ್ಕೆ ನೀರು ಸ್ವಲ್ಪ ಸೇರಿಸಿ ಬೀಸಿದ ಮಿಶ್ರಣಕ್ಕೆ ಹಾಕಿ ಹದಮಾಡಬಹುದು.


ಪಾಲಾಕ್ ಸೊಪ್ಪಿನ ತಂಬುಳಿ

ಮೇಲೆ ಹೇಳಿದ ಸಾಮಾಗ್ರಿಗಳನ್ನೇ ಉಪಯೋಗಿಸಿ ಒಗ್ಗರಿಸಿಕೊಂಡು, ಹೆಚ್ಚಿಟ್ಟಿದ್ದ ಸೊಪ್ಪನ್ನೂ ಹಾಕಿ ಹುರಿದು, ತಣಿದ ನಂತರ ಕಾಯಿಯೊಂದಿಗೆ ಬೀಸಿ, ಉಪ್ಪು ಮಜ್ಜಿಗೆ ಬೆರೆಸಿದರೆ ಆಯಿತು. ಈ ತಂಬುಳಿಗೆ ಇಂಗು ಹಾಕಿದರೆ ಮತ್ತೂ ರುಚಿಕರ. ಹಾಗಾಗಿ ತಪ್ಪದೇ ಒಗ್ಗರಣೆಗೆ ಹಾಕಿ. ಬೆಲ್ಲವನ್ನು ಹಾಕಬಾರದು.

ಅತ್ತಿಕುಡಿ ತಂಬುಳಿ

ಅತ್ತಿ ಕುಡಿಯ ಹಸಿರಾದ ಚಿಗುರೆಲೆಗಳು - ೧೦-೧೫ (ಬಲಿತ ದೊಡ್ಡ ಎಲೆಗಳಲ್ಲಾ!)... ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಂಡು ಮೇಲೆ ಪಾಲಾಕ್ ಸೊಪ್ಪಿನ ತಂಬುಳಿಯ ವಿಧಾನದಂತೇ ಮಾಡಿಕೊಳ್ಳುವುದು. ಆಮೇಲೆ ಸ್ವಲ್ಪ ಬೆಲ್ಲವನ್ನೂ ಸೇರಿಸಬೇಕು.


ಇದೇ ರೀತಿ ನೆಲನೆಲ್ಲಿತಂಬುಳಿಯನ್ನೂ ಮಾಡುತ್ತಾರೆ..ಆದರೆ ಇದಕ್ಕೆ ಕರಿಮೆಣಸಿನ ಕಾಳುಗಳನ್ನು ಸೇರಿಸುತ್ತಾರಷ್ಟೇ.. ಇದನ್ನು ಮಾಡುವ ವಿಧಾನವನ್ನು ಮೊದಲೇ ವಿವರಿಸಿದ್ದು.. ಅದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ - "ನೆಲನೆಲ್ಲಿ"




ಹುರಿಯದೇ ಹಸಿಯಾಗಿ ಬೀಸಿ ಮಾಡುವ ತಂಬುಳಿಗಳು - 

ಲೆಮನ್ ಗ್ರಾಸ್ ಅಥವಾ ಮಜ್ಜಿಗೆ ಹುಲ್ಲಿನ ತಂಬುಳಿ :- 
೩-೪ ಮಜ್ಜಿಗೆ ಹುಲ್ಲನ್ನು ಕತ್ತರಿಸಿಟ್ಟುಕೊಂಡು ಅದಕ್ಕೆ ಹೆಬ್ಬೆರಳಿನ ಗಾತ್ರದ ಶುಂಠಿಯನ್ನು ಹೆಚ್ಚು ಹಾಕಿ, ಕಾಯಿತುರಿಯೊಂದಿಗೆ (೪-೫ ಚಮಚ) ಹಸಿಯಾಗಿ ಬೀಸಬೇಕು. ತದನಂತರ ಚೆನ್ನಾಗಿ ಸೋಸಿ ಅದರ ರಸವನ್ನಷ್ಟೇ ಹಿಂಡಿ ತೆಗೆದು, ಮಜ್ಜಿಗೆಯನ್ನೋ ಇಲ್ಲಾ ಮೇಲೆ ಹೇಳಿದಂತೇ (ಮೆಂತೆಸೊಪ್ಪಿನ ತಂಬುಳಿಗೆ..) ಮೊಸರನ್ನೋ ಸೇರಿಸಿ, ಉಪ್ಪು ಹಾಕಿದರೆ ಬಲುರುಚಿಕರ, ಆರೋಗ್ಯಕರ ಲೆಮನ್ ಗ್ರಾಸ್ ತಂಬುಳಿ ರೆಡಿ!

ಇದೇ ರೀತಿ ಕೊತ್ತುಂಬರಿ ಸೊಪ್ಪಿನ ತಂಬುಳಿಯನ್ನೂ ಮಾಡುತ್ತಾರೆ. : -
ಒಂದು ಪುಷ್ಠಿ ಕೊತ್ತುಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಅದಕ್ಕೆ ಹೆಬ್ಬೆರಳಿನ ಗಾತ್ರದ ಶುಂಠಿ ಸೇರಿಸಿ ಕಾಯಿಯೊಂದಿಗೆ ಹಸಿಯಾಗಿ ಬೀಸಬೇಕು. ಇದು ನುಣ್ಣಗೆ ಬೀಸಲು ಸಾಧ್ಯವಿರುವುದರಿಂದ ಸೋಸುವ ತಾಪತ್ರವಿಲ್ಲ. ಹಾಗೇ ಬೀಸಿದ ಮಿಶ್ರಣಕ್ಕೆ ಮಜ್ಜಿಗೆ+ಉಪ್ಪು ಬೇಕಿದ್ದರೆ ನೀರು ಹಾಕಿ ಹದಮಾಡಿಕೊಳ್ಳುವುದು. ಈ ತಂಬುಳಿಗೆ ಬೆಲ್ಲ ಹಾಕಲೇಬಾರದು! ರುಚಿಗೆಡುತ್ತದೆ.

---------

ಕರಿಬೇವಿನ ತಂಬುಳಿ, ಈರುಳ್ಳಿ ತಂಬುಳಿ, ವಿಟಮಿನ್ ಎಲೆಯ ತಂಬುಳಿ, ಎಲವರಿಗೆ ಕುಡಿಯ ತಂಬುಳಿ - ಹೀಗೆ ಹತ್ತು ಹಲವುಬಗೆಯ ತಂಬುಳಿಗಳಿವೆ... ಆಸಕ್ತರು ನನ್ನನ್ನು ಮೈಲ್ ಮೂಲಕ ಸಂಪರ್ಕಿಸಬಹುದು :).

-ತೇಜಸ್ವಿನಿ ಹೆಗಡೆ.

Wednesday, August 29, 2012

ಸರಳ, ಸುಲಭ, ಅತಿ ರುಚಿಕರ ಈ ಮೆಂತೆಸೊಪ್ಪು + ಕಡಲೇಹಿಟ್ಟಿನ ಪಲ್ಯ


ಮೆಂತೆಸೊಪ್ಪು(fenugreek leaves) ಬಾಯಿಗೆ ಸ್ವಲ್ಪ ಕಹಿ ಎನಿಸಿದರೂ ದೇಹಕ್ಕೆ ಬಹು ಸಿಹಿ... ಹಿತ. ಸರಿಯಾದ ರೀತಿಯಲ್ಲಿ ಬಳಸಿದರೆ ಕಹಿ ಅಂಶವೂ ಗಮನಕ್ಕೆ ಬಾರದು.  ವಿಟಮಿನ್ ಎ, ಸಿ ಹಾಗೂ ಪೊಟಾಶಿಯಂ, ಕಬ್ಬಿಣ, ಕ್ಯಾಲ್ಶಿಯಂ ಖನಿಜಾಂಶಗಳನ್ನು ಹೊಂದಿರುವ ಮೆಂತೆ ಸೊಪ್ಪು ಹತ್ತು ಹಲವು ರೋಗಗಳಿಗೆ ರಾಮಬಾಣ. ಬಲು ತಂಪು ಈ ಸೊಪ್ಪು.

ಮಧುಮೇಹ, ಮಲಬದ್ಧತೆ, ತಲೆನೋವು, ಕಣ್ಣಿನ ಸಮಸ್ಯೆ, ನೆತ್ತಿಯುರಿ, ಪಿತ್ಥ - ಈ ಎಲ್ಲಾ ರೋಗಗಳನ್ನು ಮೆಂತೆ ಕಾಳು ಹಾಗೂ ಸೊಪ್ಪಿನ ಬಳಕೆಯಿಂದ ದೂರವಿರಿಸಬಹುದು.

ಮಧುಮೇಹಿಗಳಿಗೊಂದು ಚಿಕ್ಕ ಸಲಹೆ : ರಾತ್ರಿ ಸ್ವಲ್ಪ ಮೆಂತೆ ಕಾಳನ್ನು ನೆನೆಸಿಕೊಂಡು ಮರುದಿವಸ ಅದನ್ನು ಬೀಸಿ ಹಸಿಹೊಟ್ಟೆಯಲ್ಲಿ ಕುಡಿಯುವುದರಿಂದ ಬಹು ಬೇಗ ಮಧುಮೇಹ ತಹಬಂದಿಗೆ ಬರುವುದು. ಇಲ್ಲಾ... ಮೆಂತೆಕಾಳನ್ನು ಹಾಗೇ ಹುಡಿ ಮಾಡಿಟ್ಟುಕೊಂಡು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು, ಊಟದ ಸಮಯದಲ್ಲಿ ಮೊದಲ ಕೆಲವು ತುತ್ತುಗಳಿಗೆ ಈ ಹಿಟ್ಟನ್ನು ಕಲಸಿ ತಿನ್ನುವುದರಿಂದಲೂ ತುಂಬಾ ಉಪಕಾರಿ.

ಇನ್ನು ಹಸಿ ಬಾಣಂತಿಯರಲ್ಲಿ ಹಾಲಿನ ಕೊರತೆ ಹಲವು ಬಾರಿ ಕಾಡುವುದು. ಆಗಾಗ ಮೆಂತೆ ಸೊಪ್ಪಿನ ಸೂಪ್, ತಂಬುಳಿ, ಪಲ್ಯ, ಹುಳಿ, ದೋಸೆ ಇತ್ಯಾದಿ ತಿಂಡಿ ಪದಾರ್ಥಗಳ ರೂಪದಲ್ಲಿ ಕೊಡುವುದರಿಂದ, ಸ್ವಲ್ಪ ಮೆಂತೆ ಕಾಳನ್ನು ಬೀಸಿ ಹಾಲಿನೊಂದಿಗೆ ಬೆರೆಸಿಕೊಡುವುದರಿಂದಲೂ ಸಮಸ್ಯೆಯನ್ನು ನಿವಾರಿಸಬಹುದು. (ಇದು ಅನಾದಿಕಲದಿಂದಲೂ ನಡೆಸಿಕೊಂಡು ಬಂದ ರೀತಿ-ನೀತಿ. ಸತ್ಯಕ್ಕೆ ಸತ್ಯವಾದ್ದು. ಹಾಗೂ ವೈಜ್ಞಾನಿಕವಾಗಿಯೂ ಒಪ್ಪಿಕೊಂಡದ್ದು.)

ಇಂತಹ ಬಹೂಪಯೋಗಿ ಮೆಂತೆ ಸೊಪ್ಪನ್ನು ನಮ್ಮ ಕಡೆ (ಶಿರಸಿಯ ಕಡೆ) ತಂಬುಳಿ, ಗೊಜ್ಜು, ದೋಸೆ, ಚಪಾತಿ, ಮೆಂತೆ ರೈಸ್ - ಇತ್ಯಾದಿ ತಿನಿಸುಗಳನ್ನು ತಯಾರಿಸಲು ವಿಶೇಷವಾಗಿ ಬಳಸುತ್ತಾರೆ.

CopyRight : Tejaswini Hegde
ಇತ್ತೀಚಿಗೆ ಮುಂಬಯಿಯಲ್ಲಿದ್ದ ನನ್ನ ಚಿಕ್ಕಮ್ಮ ನಮ್ಮ ಮನೆಗೆ ಬಂದಾಗ ಮೆಂತೆ ಸೊಪ್ಪು + ಕಡಲೇ ಹಿಟ್ಟು ಬೆರೆಸಿ ತಯಾರಿಸುವ ವಿಶೇಷರೀತಿಯ ಸುಲಭ ಸರಳ ಪಲ್ಯವೊಂದನ್ನು ಕಲಿಸಿಕೊಟ್ಟರು. ಇದು ಅಲ್ಲಿಯ ವಿಶೇಷತೆಯಂತೆ! ತಿನ್ನಲು ಬಹು ರುಚಿಕರವಾಗಿತ್ತು. ಬೆಳ್ಳುಳ್ಳಿಯನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಅದು ಕಡಲೇಹಿಟ್ಟಿನೊಳಗಿನ ಗ್ಯಾಸ್ಟ್ರಿಕ್ ಅಂಶವನ್ನು ತೆಗೆಯುವುದು. ಮೆಂತೆಸೊಪ್ಪಿನೊಳಗಿನ ಕಹಿ ಅಂಶವನ್ನು ಕಡಲೇ ಹಿಟ್ಟು ಹೀರಿಕೊಳ್ಳುವುದರಿಂದ ಬಾಯಿಗೆ ಹಿತ. ಹಾಗೆಯೇ ಮೆಂತೆಯೊಳಗಿರುವ ಉತ್ತಮ ಅಂಶಕ್ಕೆ ಬೆಳ್ಳುಳ್ಳಿಯ ಉತ್ತಮ ಅಂಶವೂ ಸೇರುವುದರಿಂದ ಹೊಟ್ಟೆಗೂ ಹಿತ.  

ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು :

೧. ಮೆಂತೆ ಸೊಪ್ಪು (ಹದಾ ದೊಡ್ಡ ಕಟ್ಟು) - ೨
೨. ಈರುಳ್ಳಿ - ೩
೩. ಬೆಳ್ಳುಳ್ಳಿ - ೭-೮ ಎಸಳು
೪. ಕಡಲೇ ಹಿಟ್ಟು - ಒಂದು ಬೌಲ್
೫. ಒಗ್ಗರಣೆಗೆ- ಸಾಸಿವೆ ಮತ್ತು ಉದ್ದಿನಬೇಳೆ - ೧/೪ ಚಮಚ
೬. ಅರಿಶಿನ - ಚಿಟಿಕೆಯಷ್ಟು.
೭. ಮೆಣಸಿನ  ಪುಡಿ (ಖಾರದ ಪುಡಿ) - ನಿಮ್ಮ ಖಾರಕ್ಕೆ ತಕ್ಕಷ್ಟು [ಸಾಮಾನ್ಯವಾಗಿ ೨ ಚಮಚ.]
೮. ಹುಳಿಪುಡಿ - ೧ ಚಮಚ
೯. ಉಪ್ಪು - ರುಚಿಗೆ ತಕ್ಕಷ್ಟು
೧೦. ಒಗ್ಗರೆಣೆಗೆ ಎಣ್ಣೆ - ೫-೬ ಚಮಚ

ಮಾಡುವ ವಿಧಾನ :

೧. ಮೊದಲಿಗೆ ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಬೇಕು. ಹಾಗೆಯೇ ಈರುಳ್ಳಿಯನ್ನೂ ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಬೇಕು.

೨. ಒಗ್ಗರಣೆಗೆ ಎಣ್ಣೆ+ಸಾಸಿವೆ+ಉದ್ದಿನ ಬೇಳೆಯನ್ನು ಹಾಕಿ ಅದು ಚಟಪಟಗುಡುತ್ತಲೇ, ಬೆಳ್ಳುಳ್ಳಿ ಎಸಳುಗಳನ್ನು ಹಾಕಬೇಕು.

೩. ಬೆಳ್ಳುಳ್ಳಿ ಎಸಳುಗಳು ಕಂದು ಬಣ್ಣಕ್ಕೆ ತಿರುಗುತ್ತಲೇ ಹೆಚ್ಚಿಟ್ಟ ಈರುಳ್ಳಿ ಚೂರುಗಳನ್ನು ಹಾಕಿ ಹುರಿಯಬೇಕು.

೪. ಈರುಳ್ಳಿ ಚೂರುಗಳು ಕೆಂಪಾಗುತ್ತಿದ್ದಂತೆಯೇ ಚಿಟಿಕಿ ಅರಿಶಿನ ಹಾಕಿ ತಕ್ಷಣ ಮೆಂತೆ ಸೊಪ್ಪನ್ನು ಹಾಕಬೇಕು.

ನೆನಪಿಡಿ - ಅರಿಶಿನವನ್ನು ಈರುಳ್ಳಿ ಬೆಂದ ನಂತರವೇ ಹಾಕಿ, ಮೆಂತೆ ಸೊಪ್ಪನ್ನು ಹಾಕುವ ಮೊದಲಷ್ಟೇ ಹಾಕಬೇಕು. ಮೊದಲೇ ಅರಿಶಿನ ಹಾಕಿದರೆ ಅದು ಸೀದು ಹೋಗುವ ಸಂಭವವಿರುತ್ತದೆ.

೫. ಮೆಂತೆ ಸೊಪ್ಪು ಹಾಕಿದ ಮೇಲೆ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹುಳಿ, ಖಾರದ ಹುಡಿಗಳನ್ನು ಹಾಕಿ ಕಲಸಿ ಒಗ್ಗರಣೆಯ ಎಣ್ಣೆಯಲ್ಲೇ ೩ ನಿಮಿಷ ಬೇಯಲು ಬಿಡಬೇಕು.

೬. ಮಿಶ್ರಣ ತುಸು ಬೆಂದ ಮೇಲೆ ಕಡಲೇ ಹಿಟ್ಟನ್ನು ಮೇಲಿನಿಂದ ಉದುರಿಸುತ್ತಾ ಹೋಗಬೇಕು. ಕಡಲೇ ಹಿಟ್ಟು ಮೆಂತೆಸೊಪ್ಪಿನ ಮಿಶ್ರಣವನ್ನು ಸಂಪೂರ್ಣ ಕವರ್ ಆಗುವಂತೇ ಹಾಕಬೇಕು. ಕಲಸಬಾರದು.

೭. ಕಡಲೇ ಹಿಟ್ಟು ಮೆಂತೆಸೊಪ್ಪನ್ನು ಸಂಪೂರ್ಣ ಆವರಿಸಿಕೊಂಡ ಮೇಲೆ ಮುಚ್ಚಿಟ್ಟು ೫ ನಿಮಿಷ ಹಾಗೇ ಬೇಯಿಸಬೇಕು (ಕಲಸಬಾರದು... ಆಗಾಗ ಮುಚ್ಚಳ ತೆಗೆದು ಉಗಿ ಕಡಿಮೆ ಮಾಡಬಾರದು). ಸೊಪ್ಪಿನೊಳಗಿರುವ ನೀರಿನಲ್ಲೇ ಕಡಲೇಹಿಟ್ಟು ಸ್ವಲ್ಪ ಬೇಯುವುದು.

೮. ತದನಂತರ ಮುಚ್ಚಳ ತೆಗೆದು ಚೆನ್ನಾಗಿ ಕಲಸುತ್ತಾ, ತೊಳಸುತ್ತಾ ಕಡಲೇಹಿಟ್ಟು ಸರಿಯಾಗಿ ಬೇಯುವವರೆಗೆ ೫ - ೬ ನಿಮಿಷ ಬೇಯಿಸಿ ಗ್ಯಾಸ್ ನಂದಿಸಿಬಿಡಿ.

ಕಡಲೇ ಹಿಟ್ಟು ಚೆನ್ನಾಗಿ ಬೆಂದರೆ ಪಲ್ಯ ತಿನ್ನಲು ತಯಾರೆಂದು ಲೆಕ್ಕ. ಅರೆಬೆಂದರೆ ಹೊಟ್ಟೆಗೆ ಹಾಳು. ಹಾಗಾಗಿ ಮುಚ್ಚಿಟ್ಟು ತುಸು ಹೊತ್ತು ಬೇಯಿಸಿದ ನಂತರ, ತಳ ಹಿಡಿಯದಂತೇ ಆಗಾಗ ತೊಳೆಸುತ್ತಾ ಬೇಯಿಸುವುದು ಅತಿ ಅವಶ್ಯಕ. 

ಒಮ್ಮೆ ತಿಂದರೆ ಮಗದೊಮ್ಮೆ ಬಯಸುವಷ್ಟು ರುಚಿಕರ ಈ ಪಲ್ಯ. ಗಮನವಿಟ್ಟು ಮಾಡಿದರೆ ೧೫ ನಿಮಿಷದೊಳಗೆ ಪಲ್ಯ ರೆಡಿ (ಹೆಚ್ಚಿಕೊಳ್ಳುವ ಸಮಯ ಬಿಟ್ಟು :)).

-ತೇಜಸ್ವಿನಿ ಹೆಗಡೆ.

Thursday, September 22, 2011

ದಿಢೀರ್ ರವಾ ಮೊಸರು ಇಡ್ಲಿ


©: Tejaswini Hegde

ಸಿಹಿ ಇಡ್ಲಿ, ಚಪ್ಪೆ ಇಡ್ಲಿ, ಕೊಟ್ಟೆ ಇಡ್ಲಿ, ಮೂಡೆ (ದಕ್ಷಿಣ ಕನ್ನಡದ ಕಡೆಯ ವಿಶೇಷ ತಿನಿಸು), ಸವತೆ ಇಡ್ಲಿ, ಹಲಸಿನ ಹಣ್ಣಿನ ಇಡ್ಲಿ, ಉದ್ದು ರವಾ ಇಡ್ಲಿ, ಉದ್ದು ಅಕ್ಕಿತರಿ ಇಡ್ಲಿ - ಹೀಗೇ ನಾನಾ ತರಹದ ಇಡ್ಲಿಗಳಿವೆ. ಬಹುತೇಕೆ ಹೆಚ್ಚಿನ ಇಡ್ಲಿಗಳಲ್ಲಿ ಉದ್ದು ಪ್ರಧಾನ ವಸ್ತುವಾಗಿರುತ್ತದೆ. ಉದ್ದನ್ನು ಹಿಂದಿನ ದಿನವೇ ೨ ತಾಸಾದರೂ ನೆನೆಹಾಕಿಟ್ಟು, ರುಬ್ಬಿ, ಬುರುಗು ತರಿಸಿ ಅದಕ್ಕೆ ಅಕ್ಕಿತರಿಯನ್ನೋ ಇಲ್ಲಾ ರವೆಯನ್ನು ಹುರಿದೋ ಸೇರಿಸಿ ಮರುದಿವಸ ಹೊಯ್ಯುವುದು ಇಡ್ಲಿ ತಯಾರಿಕೆಯ ಸಾಂಪ್ರದಾಯಿಕ  ವಿಧಾನ ಎನ್ನಬಹುದು. 

ಆದರೆ ಒಮ್ಮೊಮ್ಮೆ ಉಪವಾಸ ವ್ರತ ದಿವಸಗಳಲ್ಲಿ ಉದ್ದಿನ ಜೊತೆ ಅಕ್ಕಿತರಿ ಬಳಸುವಂತಿರುವುದಿಲ್ಲ... ಮತ್ತೆ ಯಾವಾಗಲೋ ಉದ್ದನ್ನು ನೆನೆಹಾಕಲೇ ಮರೆತು ಬಿಡುತ್ತೇವೆ. ಇನ್ನು ಕೆಲವರಿಗೆ ರವೆ+ಉದ್ದಿನ ಇಡ್ಲಿ ಅಷ್ಟು ಸೇರಿಬರದು. (ಉದಾ:ನಾನೇ:)). ಹೀಗಿರುವಾಗ ಬರೀ ಅಕ್ಕಿತರಿಯನ್ನೋ ಇಲ್ಲಾ ಬರೀ ಉದ್ದನ್ನೋ ಹಾಕಿ ಮಾತ್ರ ಇಡ್ಲಿತಯಾರಿಸಲಾಗದು. ಹಲವರಿಗೆ ಉದ್ದು ಆರೋಗ್ಯಕ್ಕೆ ಸರಿ ಬರದು. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಬೆಳ ಬೆಳಗ್ಗೆ ಉದ್ದಿನ ತಿಂಡಿಯನ್ನು ಸೇವಿಸಲು ಇಷ್ಟಪಡರು. ಹೀಗಿರುವಾಗ ರವಾ ಮೊಸರು ಇಡ್ಲಿ ಬಹು ಉಪಯೋಗಿ.

ಬೆಳಿಗ್ಗೆ ಎದ್ದ ಕೂಡಲೇ ಏನು ತಿಂಡಿ ಮಾಡಲಿ ಎಂದು ಚಿಂತಿಸುವವರಿಗೆ, ಮನೆಯಲ್ಲಿ ನೆಂಟರಿಷ್ಟರು ತುಂಬಿದ್ದಾಗ, ಉದ್ದು ನೆನೆಹಾಕಲು ಮರೆತು ಪೇಚಾಡುವ ಪ್ರಸಂಗ ಎದುರಾದಾಗ ಈ ದಿಢೀರ್ ಮೊಸರು ರವಾ ಇಡ್ಲಿ ಅತ್ಯುತ್ತಮ ತಿಂಡಿ. ತಯಾರಿಸುವುದೂ ಸುಲಭ, ರುಚಿಕರ ಹಾಗೂ ಆರೋಗ್ಯಕರ. ಆದರೆ ಇದನ್ನು ತಯಾರಿಸಲು ಪ್ರಮುಖವಾಗಿ ಸ್ವಲ್ಪ ಹೆಚ್ಚು ಮೊಸರು ಬೇಕಾಗುತ್ತದೆ. ಹೆಪ್ಪು ಹಾಕಿಡಲು ಮರೆತರೂ ಅಂಗಡಿಗಳಲ್ಲಿ ಮೊಸರು ಸಿಗುವುದರಿಂದ ತಯಾರಿಸಲು ಪರದಾಡಬೇಕೆಂದಿಲ್ಲ.

ಬೇಕಾಗುವ ಸಾಮಗ್ರಿಗಳು (೨೭-೩೦ ಇಡ್ಲಿಗಳಿಗೆ)

ಕಡಲೇ ಬೇಳೆ - ೨ ಚಮಚ
ಹಸಿಮೆಣಸು - ೧-೨
ಕುತ್ತೊಂಬರಿ ಸೊಪ್ಪು - ಒಂದು ಮುಷ್ಟಿ
ಸಾಸಿವೆ - ೧/೪ ಚಮಚ
ಕರಿಬೇವು - ೨-೩ ಎಸಳು (೧೦-೧೫ ಎಲೆ)
ತುಪ್ಪ ಅಥವಾ ತೆಂಗಿನೆಣ್ಣೆ - ೨-೩ ಚಮಚ 
ಕ್ಯಾರಟ್ - ೧ (ಚಿಕ್ಕ ಗಾತ್ರದ್ದದರೆ ೨)
ರವೆ - ೩ ಲೋಟ 
ಮೊಸರು - ೩ ಲೋಟ
ಬೇಕಿದ್ದಲ್ಲಿ ಚಿಟಿಕೆ ತಿನ್ನುವ ಸೋಡ (ಬೇಕಿಂಗ್ ಸೋಡ)

ಮಾಡುವ ವಿಧಾನ

*ಮೊದಲು ಕೊತ್ತುಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಂಡು, ಕ್ಯಾರೆಟ್ ಅನ್ನು ತುರಿದಿಟ್ಟುಕೊಳ್ಳಬೇಕು.

* ತುಪ್ಪ ಅಥವಾ ಅಡುಗೆ ಎಣ್ಣೆಯನ್ನು ಹಾಕಿ ಒಗ್ಗರಣೆಗೆ ಇಡಬೇಕು. ಸಾಸಿವೆ ಚಟಗುಟ್ಟಿದ ನಂತರ ಕಡಲೇಬೇಳೆ ಹಾಕಿ ಅದು ಕೆಂಪಾಗುವಷ್ಟು ಹುರಿಯಬೇಕು. ಅದಕ್ಕೆ ಹಸಿಮೆಣಸು, ಕರಿಬೇವು ಎಲೆಗಳನ್ನು ಹಾಕಿ ಅವು ಗರಿಯಾದ ನಂತರ ರವೆಯನ್ನು ಹಾಕಬೇಕು. ಉಪ್ಪಿಟ್ಟಿಗೆ ಹುರಿದಷ್ಟು ಹುರಿಯಬೇಕೆಂದಿಲ್ಲ. ರವೆ ಬಿಡಿ ಬಿಡಿ ಆಗುವಷ್ಟು, ತುಸು ಬಿಸಿಯಾಗಿ ಒಗ್ಗರಣೆಯೊಂದಿಗೆ ಬೆರೆಯುವಷ್ಟು ಅಂದರೆ ಸುಮಾರು ೨-೩ ನಿಮಿಷವಷ್ಟೇ ಹುರಿದರೆ ಸಾಕು. 
(ಸೂಚನೆ : ಹುರಿಯುವಾಗ ಮೇಲಿನ ಪದಾರ್ಥಗಳೊಡನೆ ಬೇಕಿದ್ದಲ್ಲಿ ಗೋಡಂಬಿ, ದ್ರಾಕ್ಷಿಗಳನ್ನೂ ಹಾಕಿ ಹುರಿಯಬಹುದು.)

*ಹುರಿದ ಮಿಶ್ರಣ ತಣಿದ ಮೇಲೆ ಅದಕ್ಕೆ ಮೊಸರನ್ನು ಹಾಕಿ ಗಟ್ಟಿಯಾಗಿ ಇಡ್ಲಿ ಹಿಟ್ಟಿನ ಹದಕ್ಕೇ ಕಲಸಬೇಕು. ನೀರು ಹಾಕದಿದ್ದರೆ ಉತ್ತಮ. ಒಂದೊಮ್ಮೆ ಮೊಸರು ಸ್ವಲ್ಪ ಕಡಿಮೆ ಬಿದ್ದಲ್ಲಿ ಅರ್ಧ ಲೋಟ ನೀರು ಹಾಕಬಹುದು. ಹಿಟ್ಟು ಮಾತ್ರ ತೆಳ್ಳಗಾಗಬಾರದು, ಇಡ್ಲಿ ಹಿಟ್ಟಿನ ಹದಕ್ಕೇ ಬರಬೇಕು.

* ಈ ಮಿಶ್ರಣಕ್ಕೆ ತುರಿದಿಟ್ಟ ಕ್ಯಾರೆಟ್ ಹಾಗೂ ಕುತ್ತೊಂಬರಿ ಸೊಪ್ಪನ್ನು ಹಾಕಿ, ಉಪ್ಪು ಸೇರಿಸಿ, ಬುರುಗು ಬರಲು ಬೇಕಿದ್ದಲ್ಲಿ ಚಿಟಿಕೆ ಬೇಕಿಂಗ್ ಸೋಡ ಹಾಕಿ ಕದಡಿ ೨ ನಿಮಿಷ ಹಾಗೇ ಬಿಡಬೇಕು. (ನೀವು ತಿನ್ನುವ ಸೋಡ ಬಳಸಿದರೆ, ಹಿಟ್ಟು ತಕ್ಷಣ ಬುರುಗು ಬಿಡತೊಡಗುತ್ತದೆ.) 

* ಇಡ್ಲಿ ಹಿಟ್ಟನ್ನು ಇಡ್ಲಿಪಾತ್ರೆಗೆ ಹೊಯ್ದು ಬೇಯಿಸಿದರೆ ಬಿಸಿ ಬಿಸಿ ಮೊಸರು ರವಾ ಇಡ್ಲಿ ತಿನ್ನಲು ತಯಾರು. ಸಾಂಬಾರ್ ಅಥವಾ ಸಾರಿಗಿಂತಲೂ ಕಾಯಿಚಟ್ನಿಯೊಂದಿಗೆ ಇದನ್ನು ಸೇವಿಸಲು ಬಲು ರುಚಿಕರ. 

ಕ್ಯಾರಟ್, ಕರಿಬೇವು, ಕೊತ್ತುಂಬರಿ ಸೊಪ್ಪು ಹಾಕುವುದರಿಂದ ಆರೋಗ್ಯಕ್ಕೂ ಉತ್ತಮವಾದ ತಿನಿಸು... ತಯಾರಿಸಲು ಬಲು ಸುಲಭ.

-ತೇಜಸ್ವಿನಿ ಹೆಗಡೆ.

Thursday, February 03, 2011

ಬಾಯಲ್ಲಿ ನೀರೂರಿಸುವ ಬಟಾಣಿ ಸಾರು

http://guide2herbalremedies.com

ಬಟಾಣಿ ಸಾರನ್ನು ಬಹು ಸುಲಭವಾಗಿ, ಹೆಚ್ಚು ಸಾಮಗ್ರಿಗಳನ್ನು ಬಳಸದೇ ತಯಾರಿಸಬಹುದು. ಬಿಸಿ ಬಿಸಿ ಅನ್ನಕ್ಕೆ ಕಲಸಿ ತಿನ್ನಲು ಈ ಸಾರು ತುಂಬಾ ಚೆನ್ನಾಗಿರುತ್ತದೆ. ಬೆಳ್ಳುಳ್ಳಿ, ಈರುಳ್ಳಿ, ಇಂಗುಗಳನ್ನು ಬಳಸುವುದರಿಂದ ವಾಯುಪ್ರಯೋಕದ ಭಯವೂ ಇರದು. ಬಟಾಣಿ ಕಾಳನ್ನು ಸಮೋಸ, ಫಲಾವ್, ಘೀ ರೈಸ್‌ಗಳ ತಯಾರಿಕೆಯಲ್ಲೂ ಸಾಮಾನ್ಯವಾಗಿ ಬಳಸುತ್ತಾರೆ. ಬಟಾಣಿ ಕಾಳಿನ ಪಕೋಡ ಕೂಡ ತುಂಬಾ ಚೆನ್ನಾಗಿರುತ್ತದೆ.

ಆರೋಗ್ಯಕರ ಹಾಗೂ ಬಹೋಪಯೋಗಿ ಬಟಾಣಿ

೧. ಸಂಶೋಧನೆಗಳ ಪ್ರಕಾರ ಬಟಾಣಿ ಕಾಳು ವಿಟಮಿನ್‌ಗಳ "ಪವರ್ ಹೌಸ್". ಇದರಲ್ಲಿ ವಿಟಮಿನ್ ಎ, ಬಿ ಹಾಗೂ ಸಿಗಳು ಹೇರಳವಾಗಿದೆ. 
೨. ಇದರ ಸೇವನೆ ಮೂಳೆಗಳ ಬಲ ವೃದ್ಧಿಗೆ, ರಕ್ತ ಪರಿಚಲನೆಗೆ, ರಕ್ತ ಹೆಪ್ಪುಗಟ್ಟುವಿಕೆಗೂ ತುಂಬಾ ಉಪಯುಕ್ತ. ಹೇರಳ ಪ್ರೋಟೀನ್ ಹೊಂದಿರುವ ಬಟಾಣಿ "ಒಸ್ಟಿಯೋಪೋರೋಸಿಸ್"(ಮೂಳೆ ತೆಳ್ಳಗಾಗುವಿಕೆ, ಮೂಳೆ ಕರಗುವಿಕೆ) ರೋಗನಿವಾರಣೆಗೆ ಅತ್ಯಗತ್ಯವಾದ ವಿಟಮಿನ್ ಕೆ ಅನ್ನೂ ಹೊಂದಿದೆ.
೩. ಇವುಗಳಲ್ಲಿ ನಾರಿನಂಶ ಹೆಚ್ಚಾಗಿದ್ದು, ಕೊಬ್ಬಿನಂಶ ತೀರಾ ಕಡಿಮೆ ಹಾಗು ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ.


ಸಾರಿನ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು

ನೆನೆಸಿದ ಬಟಾಣಿ ಕಾಳು - ೧ ಲೋಟ (ತೀರಾ ದೊಡ್ಡದೂ ಅಲ್ಲ, ಅತಿ ಚಿಕ್ಕದೂ ಅಲ್ಲ)
[Note : ಹಸಿ ಬಟಾಣಿಯಾಗಿದ್ದಲ್ಲಿ ಹಾಗೇ ಬೇಯಿಸುವುದು.. ನೆನೆಸಬೇಕೆಂದಿಲ್ಲ.]
ಟೊಮೆಟೋ - ೧
ಕೊತ್ತುಂಬರಿ ಬೀಜ - ೧-೨ ಚಮಚ (ಚಿಕ್ಕ ಚಮಚ)
ಕಾಯಿ ತುರಿ - ೧ ಬಟ್ಟಲು (ಬೌಲ್)
ಅರಿಶಿನ - ಚಿಟಿಕೆ
ಬೆಳ್ಳುಳ್ಳಿ - ೨-೩ ಎಸಳು
ಈರುಳ್ಳಿ - ೧ (ಮಧ್ಯಮ ಗಾತ್ರದ್ದು)
ಇಂಗು - ಚಿಟಿಕೆ (**ಬೆಳ್ಳುಳ್ಳಿ ಹಾಕುವುದರಿಂದ ಇಂಗು ಹಾಕಲೇ ಬೇಕೆಂದಿಲ್ಲ. ಆದರೆ ಇಂಗು ಬಟಾಣಿ ಕಾಳಿನೊಳಗಿನ ವಾಯುವಿನ ಪ್ರಭಾವವನ್ನು ತಗ್ಗಿಸುವುದರಿಂದ ಬಳಸಿದರೆ ಉತ್ತಮ.)
ಕೆಂಪು ಮೆಣಸು - ೨-೩ (ಖಾರಕ್ಕೆ ತಕ್ಕಂತೆ)
ಹುಳಿ - ಗೋಲಿಯಾಕಾರದಷ್ಟು
ಉಪ್ಪು ಹಾಗೂ ಬೆಲ್ಲ - ರುಚಿಕೆ ತಕ್ಕಷ್ಟು
ಮೆಂತೆ - ೩-೪ ಕಾಳು (**ಹೆಚ್ಚು ಹಾಕಬಾರದು... ಮೆಂತೆ ಹಾಕುವುದರಿಂದ ಸಾರು ತುಸು ದಪ್ಪಗಾಗಿ ತಿನ್ನಲು ಚೆನ್ನಗಾಗುತ್ತದೆ. ಹಾಗಾಗಿ ಕೇವಲ ಕೆಲವು ಕಾಳುಗಳನ್ನಷ್ಟೇ ಹಾಕಬೇಕು. ತುಂಬಾ ಹಾಕಿದರೆ ಕಹಿ ಆಗುವುದು!)

ಮಾಡುವ ವಿಧಾನ

* ಮೊದಲು ಚೆನ್ನಾಗಿ ನೆನೆದ ಬಟಾಣಿ ಕಾಳುಗಳ ಜೊತೆ ಒಂದು ಟೊಮೆಟೊ ಹೆಚ್ಚಿಹಾಕಿ, ಕುಕ್ಕರಿನಲ್ಲಿಟ್ಟು ಒಂದು ವಿಸಿಲ್ ಹಾಕಿ ಬೇಯಿಸಿಟ್ಟುಕೊಳ್ಳಬೇಕು.
* ಈರುಳ್ಳಿಯನ್ನು ಎರಡು ಭಾಗ ಮಾಡಿ, ಅದರಲ್ಲಿ ಒಂದು ಭಾಗವನ್ನು ಮಾತ್ರ ಹಾಗೇ ಸಾರಿನೊಂದಿಗೆ ಬೆರೆಸಿ ಕುದಿಸುವಂತೆ ಹೆಚ್ಚಿಕೊಳ್ಳಿ. ಇನ್ನೊಂದು ಭಾಗವನ್ನು ರುಬ್ಬಲು ಬಳಸಬೇಕು. (ಅರ್ಧ ಭಾಗವನ್ನು ಸಾರಿನೊಂದಿಗೆ ಕುದಿಸುವ ಬದಲು ಹಾಗೇ ಪೂರ್ತಿ ಈರುಳ್ಳಿಯನ್ನು ರುಬ್ಬಿಯೂ ಹಾಕಬಹುದು)
* ಕಾಯಿತುರಿಗೆ ಕೆಂಪು ಮೆಣಸು, ಮೆಂತೆ, ಕೊತ್ತೊಂಬರಿ ಬೀಜ, ಅರ್ಧ ಭಾಗ ಈರುಳ್ಳಿ, ಬೆಳ್ಳುಳ್ಳಿ,  ಅರಿಶಿನ - ಇವಿಷ್ಟನ್ನೂ ಹಾಕಿ ನುಣ್ಣಗೆ ಬೀಸಿಕೊಳ್ಳಬೇಕು
* ಬೆಂದ ಟೊಮೆಟೋ ಹಾಗೂ ಕಾಳುಗಳಿಗೆ ಬೀಸಿದ ಮಸಾಲೆಯನ್ನು ಹಾಕಿ ಬೇಕಾದ ಪ್ರಮಾಣದಲ್ಲಿ ನೀರನ್ನು ಹಾಕಬೇಕು. ಇದಕ್ಕೆ ಹೆಚ್ಚಿಟ್ಟುಕೊಂಡಿರುವ ಉಳಿದರ್ಧ ಈರುಳ್ಳಿ, ಉಪ್ಪು, ಬೆಲ್ಲ, ಹುಳಿಯನ್ನು ಹಾಕಿ ಚೆನ್ನಾಗಿ ಕುದಿಸಿ.
* ಕುದಿದ ಮೇಲೆ ಸಾಸಿವೆ ಒಗ್ಗರಣೆ ಬೇಕಿದ್ದರೆ ಹಾಕಬಹುದು.
* ಬಿಸಿ ಬಿಸಿ ಅನ್ನದೊಂದಿಗೆ ಈ ಸಾರು ಸೂಪರ್ಬ್! ವ್ಹಾ ಎಂದು ಚಪ್ಪರಿಸದಿದ್ದರೆ ಹೇಳಿ :)
(ಬೇಕಿದ್ದರೆ ಸ್ವಲ್ಪ ಕೊತ್ತುಂಬರಿ ಸೊಪ್ಪನ್ನೂ ಕೊನೆಯಲ್ಲಿ ಹಾಕಬಹುದು.)

-ತೇಜಸ್ವಿನಿ ಹೆಗಡೆ